Monday 13 July 2015

ದಾರಿ ಹಲವಾದರೂ ಆಯ್ಕೆಯ ಅವಕಾಶ ಒಂದೇ....

ನನ್ನೊಳಗೆ ಯಾವಾಗಲೂ ಮತ್ತೆ ಮತ್ತೆ ಕೇಳುವ, ಪ್ರತಿಧ್ವನಿಸುತ್ತಲೇ ಇರುವ ಯಾರೋ ಹೇಳಿದ ಮಾತೊಂದಿದೆ. "ಸಾಧ್ಯತೆಗಳ ಬಗ್ಗೆ ಯೋಚಿಸುವುದು ಸಾಧ್ಯತೆಗಳೇ ಇಲ್ಲದಿದ್ದಾಗ ಇರುವ ಬದುಕನ್ನು ಒಪ್ಪಿಕೊಳ್ಳುವುದು" ಎಂದು. ಸೋತಾಗ ಸೋಲನ್ನು ಒಪ್ಪಿಕೊಳ್ಳುವ ಕಾಲ ಬಂದಾಗ ಸಾಧ್ಯತೆಗಳ ಬಗ್ಗೆ ಯೋಚಿಸಲೂಬಾರದು ಒಪ್ಪಿಕೊಂಡುಬಿಡಬೇಕು. ಆದರೆ ಅಷ್ಟೇ ವೇಗವಾಗಿ ಮುಂದಿನ ಗೆಲುವಿನ ಸಾಧ್ಯತೆಗಳ ಬಗ್ಗೆ, ಆ ದಾರಿಯೆಡೆಗಿನ ಆಯ್ಕೆಗಳ ಬಗ್ಗೆ ಯೋಚಿಸಬೇಕು.

ನನ್ನೊಳಗೆ  ಹೀಗೆಲ್ಲ ಯೋಚನೆಗಳು ಬಂದಾಗ ಇದ್ದಕ್ಕಿದ್ದಂತೆ ಎರಡು ಪಾತ್ರಗಳು ಹುಟ್ಟಿಕೊಂಡವು. ಒಂದು ಕಾಡಿನ ರಾಜ ಹುಲಿ ಮತ್ತೊಂದು ನಂಬಿಕೆಯ ರಾಜ ನಾಯಿ.  ಇಬ್ಬರೂ ಮಿತ್ರರು. ಇಬ್ಬರೂ ಒಂದು ಗುಡ್ಡ ಹತ್ತಿ ಎಲ್ಲಿಯೋ ದೂರದೂರಿಗೆ ಬೇಟೆಗೆ ಹೊರಟಿರುತ್ತಾರೆ. ತುಂಬಾ ಸುಸ್ತಾಗಿ, ಹಸಿವಾಗಿ,  ಬಳಲಿಬೆಂಡಾದ ಅವಕೆ ದೂರದಲ್ಲೊಂದು ಮನೆ ಕಾಣುತ್ತದೆ. ಅದೊಂದು ಬಡ ಭಿಕ್ಷುವಿನ ಮನೆ. ಇಬ್ಬರೂ ಮನೆಯೊಳಗೆ ಹೋಗಿ ಊಟ ಕೇಳುತ್ತಾರೆ. ಅಲ್ಲೇನಿರಲು ಸಾಧ್ಯ? ಬಡಭಿಕ್ಷು ಒಂದು ಮುಷ್ಟಿ ಅನ್ನ ಒಂದಷ್ಟು ಹಾಲು ನೀಡುತ್ತಾನೆ.  ನಾಯಿಗೆ ಇನ್ನು ಊಟವೇ ಸಿಗುವುದಿಲ್ಲ ಎಂದೆನಿಸಿಬಿಟ್ಟಿತು.  ಆ ಕ್ಷಣಕ್ಕೆ ಯಾವುದಾದರೂ ಸರಿಯೇ ಅದಕ್ಕೆ ಸಾಧ್ಯತೆಗಳ ಬಗ್ಗೆ, ಆಯ್ಕೆಯ ಬಗ್ಗೆ ಯೋಚಿಸಲು ಬರುವುದೂ ಇಲ್ಲ. ಆದರೆ,  ಹುಲಿ ಅದಕ್ಕೆ ಹಸಿ ಮಾಂಸವೇಬೇಕು. ಮಾಂಸ ಸಿಗುವುದಿಲ್ಲ ಎಂದು ಅನ್ನ ತಿನ್ನುವುದದಕ್ಕೆ ಗೊತ್ತೆ ಇಲ್ಲ. ಹುಲಿಯ ಗಮ್ಯ ಮಾಂಸದೂಟವೇ, ಆದರೆ ಅದಕ್ಕಿಲ್ಲಿ ಆಯ್ಕೆಯೆ ಇಲ್ಲ ಇರುವುದನ್ನ ಒಪ್ಪಿಕೊಳ್ಳುವುದೊಂದೆ ಉಳಿದಿರುವುದು,  ಅಂದರೆ ನಾಯಿಯೊಡನೆ ತಾನೂ ಅನ್ನ ತಿನ್ನಬೇಕು, ಅದು ಅದರಿಂದ ಸಾಧ್ಯವಿಲ್ಲ. ಸಾಧ್ಯತೆಗಳೇನು ಹಸಿದು ಮಲಗಬೇಕು ಇಲ್ಲ ಅಲೆಯಬೇಕು, ಹುಡುಕಬೇಕು  ಅಷ್ಟೇ.  ಸುಮ್ಮನೆ ಕುಳಿತುಕೊಂಡು ಯೋಚಿಸಿತು ಹಸಿವು ಮಲಗ ಕೊಡಲಿಲ್ಲ. ಹುಡುಕಬೇಕು, ತಿಂದುಂಡು ಬದುಕಬೇಕು ಎನಿಸಿತು. ಇದ್ಯಾವುದನ್ನೂ ಯೋಚನೆಯೇ ಮಾಡದ ನಾಯಿ ಭಿಕ್ಷು ಕೊಟ್ಟ ಅನ್ನ ಮತ್ತು ಹಾಲನ್ನು ಸ್ವಲ್ಪವೂ ಬಿಡದೆ ತಿಂದು  ಒಳಗೊಳಗೆ ಬಿಗಿತ್ತು ತಾನೇ ರಾಜನಂತೆ ಗೆದ್ದ ಭಾವದಿಂದ. ಹಸಿದ ಹುಲಿ ಅಲ್ಲಿಂದ ನಿಧಾನಕ್ಕೆ ಹೊರಬಂದಿತು.  ಹಸಿವು ಹಿರಿದಾಗುವುದು ಊಟ ಮಾಡುವವರ ಕಂಡು ನಮಗಿಲ್ಲದಿರುವಾಗಲ್ಲವೇ? ಮಾಂಸವನ್ನೇ ತಿನ್ನುವುದು ಹುಲಿಯ ಬದುಕಿನ ನಿಯಮ.  ಗೆಲುವಿನ ದಾರಿ ಎದುರೇ ಇದ್ದರೂ ಸೋತಂತೆ, ಏನೂ ಇಲ್ಲವೆಂಬಂತೆ ಮಲಗುವುದದಕ್ಕೆ ತಿಳಿದಿಲ್ಲ.  ಯಾವ ದಿಕ್ಕಿನಲ್ಲಿ ಊಟ ಸಿಗಬಹುದು ಎಂಬುದು ಸಾಧ್ಯತೆಯ ಹುಡುಕಾಟ.  ಹುಡುಕುತ್ತಾ ಹೋದ ಹುಲಿಗೆ ಕೊಬ್ಬಿದ ಜಿಂಕೆಯೊಂದು ಆ ದಿನಕ್ಕೆ ಆಹಾರವಾಯಿತು.

ಈ ಕಡೆ ಹಾಲನ್ನ ತಿಂದು ಅರ್ಧಂಬರ್ಧ ಹೊಟ್ಟೆ ತುಂಬಿಸಿಕೊಂಡ ನಾಯಿ ಮತ್ತೆ ಅಲ್ಲೆ ಅಲೆಯುತ್ತಿರುವಾಗ ಭಿಕ್ಷು ಕೋಲಲ್ಲಿ ಹೊಡೆದು ಹೊರ ಅಟ್ಟುತ್ತಾನೆ. ಅಲ್ಲಿಂದ ಹೊರಬಂದ ನಾಯಿ ಒಂದು ಬೂದಿ ರಾಶಿಯ ಮೇಲೆ ಮಲಗಿದಾಗ ಅದಕ್ಕೊಂದು ಕನಸು, ಹುಲಿಗೆ ಮಾಂಸದ ಭೊಜನ ಸಿಕ್ಕಂತೆ ತಾನು ಅಳುತ್ತಿರುವಂತೆ, ಇನ್ನೆಂದು ಬೇಟೆಯಾಡದೆ ಹೀಗೆ ಬರಿ ಅನ್ನ ತಿಂದು ಅರ್ಧ ಹೊಟ್ಟೆ ತುಂಬಿಸಿಕೊಳ್ಳುವುದಿಲ್ಲ ಎಂದು ನಿರ್ಧರಿಸಿದಂತೆ,  ಛೇ! ಕಡೆಗೂ ಮಾಂಸ ಸಿಗಲೇ ಇಲ್ಲವಲ್ಲ ಎಂದು ಕೊಳ್ಳುತ್ತಿರುವಷ್ಟರಲ್ಲೇ ಎಚ್ಚರವಾಯ್ತು ,  ಅದರೊಡನೆ ಮುಂದಿನ ಮನೆಯ ಅನ್ನದ ನೆನಪೂ.....

ಸಮಸ್ಯೆಯೊಂದು ಬಂದಾಗಲೂ ಹೀಗೆ ಪರಿಹಾರದ ಸಾಧ್ಯತೆಗಳ ಬಗ್ಗೆ ಯೋಚಿಸಬೇಕು. ಸಮಸ್ಯೆಯನ್ನು ಒಪ್ಪಿಕೊಳ್ಳಬೇಕು ನಿಜ ಆದರೆ ಗೆಲುವಿನ ಬಗ್ಗೆ ಯೋಚಿಸದೆ ಇರುವುದನ್ನೆ ಒಪ್ಪಿಕೊಳ್ಳಬೇಕು ಎಂದೇನೂ ಇಲ್ಲ. ಒಂದು ಉತ್ಕಷ್ಟ ಗೆಲುವಿನ ಹೋರಾಟ ಮಾಡಬೇಕು. ಮುಂದಿನ ದಾರಿ ಏನು?  ಅದರಲ್ಲಿ ಬರುವ ಆಯ್ಕೆ ಅಲ್ಲಿರುವ ಕಲ್ಲು, ಮುಳ್ಳು ಹೀಗೆ ಎಲ್ಲದರ ಬಗ್ಗೆಯೂ ಯೋಚಿಸಬೇಕು.ಆಯ್ಕೆಗಳೆಷ್ಟು ಯಾವುದು ಉತ್ತಮ,  ಸೋತರೆ ಅದನ್ನು ಒಪ್ಪಿಕೊಳ್ಳುಲುಬೇಕಾದ,  ಕಟ್ಟಿಕೊಳ್ಳಬಹುದಾದ ಮನಸ್ಥಿತಿ ಏನು ಹೀಗೇ ಎಲ್ಲವನ್ನೂ ಚಿಂತನೆ ಮಾಡಬೇಕು.  ಇನ್ನು ಆಯ್ಕೆಯ ಸಾಧ್ಯತೆಗಳೇ ಇಲ್ಲವೆಂಬುದೇ ನಿಜವಾದರೆ ಒಪ್ಪಿಕೊಳ್ಳಬೇಕು.  ಒಮ್ಮೆ ಒಪ್ಪಿಕೊಂಡೆಯೊ ಹಳಸಿದ ಅನ್ನವನ್ನೇ ಚಿತ್ರಾನ್ನ ಮಾಡಿ ಹೊಸ ರುಚಿ ಎಂದು ತಿಂದಂತೆ ಬದುಕಿಬಿಡಬೇಕು.  ಸೋಲನ್ನು ಒಪ್ಪಿಕೊಳ್ಳುವುದು ಜೀವನ ನಿಜ ಆದರೆ ಗೆಲುವಿನ ಹಾದಿಯೇ ಇಲ್ಲವೆಂದು  ಸೋಲನ್ನೇ ಅಪ್ಪಿಕೊಂಡು ಕನಸುಕಾಣುವುದೊಂದೆ ಆಗಬಾರದಲ್ಲವಾ?

5 comments:

  1. ಸಂಧ್ಯಾ -
    ನಿನ್ನ ಮಟ್ಟಿಗೆ ಹೊಸತನದ ಬರಹ...
    ಬರೆಯುತ್ತಿರು...❤

    ReplyDelete
  2. houdu.hosatanada baraha.innashtu spashtatege prayatnisu mundia barahadalli.keep writing

    ReplyDelete
  3. Wow... Chenda bariteera..! Sandeshavu ide..!! Good luck mouni..! 👍

    ReplyDelete
  4. ವಿಭಿನ್ನವಾದರೂ ಬರಹ ಎಲ್ಲೂ ಭಿನ್ನವಾಗಲಿಲ್ಲ....

    ಒಳ್ಳೆ ಬರಹ..

    ReplyDelete