Thursday 6 April 2023

ಬದುಕಿನ ಮತ್ತೊಂದು ಪುಟ ತೆರೆದುಕೊಳ್ಳುವ ಮುನ್ನ...

ಬೆಳಗಾದರೆ ೩೧ನೇ ವಸಂತಕ್ಕೆ ಕಾಲಿಡುತ್ತಿದ್ದೇನೆ. ದಿನವೂ ತೆರೆದುಕೊಳ್ಳುವ ಬರೆದ ಸಾಲುಗಳನ್ನೆ ಮತ್ತೆ ಮತ್ತೆ ಓದುತ್ತಾ ಇದು ಹೀಗಿರಲಿಲ್ಲ ಇದು ಹೀಗೇ ಆಯಿತಲ್ಲಾ ಎಂದುಕೊಳ್ಳುತ್ತಾ ಇರುವ ದಿನಗಳನ್ನು ಕಳೆಯುತ್ತಿರುವ ಇದೇ ಬದುಕಿನ ಮತ್ತೊಂದು ದಿನವಷ್ಟೆ ನಾಳೆಯೂ.. ಆದರೂ ಬರೆಯಬೇಕು.

ಈಗಾ ಅರ್ಥವಾಗಿದೆ ಬರೆಯಬೇಕು ಅಲ್ಲಿಂದಲೇ ಬದುಕಿಗೆ ಹೊಸ ಅರ್ಥಬರುವುದು. ಯೋಚನೆಗಳಿಗೆ, ಮಾತುಗಳಿಗೆ  ಜಾಗವೊಂದು ಬೇಕು ನಂಗೆ ಅದು "ಅಭಿಸಾರಿಕೆ". 

ಸಿಹಿ ನೆನಪುಗಳನ್ನು ಕೂಡಿಡಬೇಕಂತೆ ಆದರೆ, ಕೂಡಿಟ್ಟಿದ್ದು ಕೊಳೆಯುತ್ತದೆ. ಅಂದರೆ ಹರಿಬಿಡಬೇಕು, ಹರಿದಲೆಲ್ಲ ಹಸಿರು, ಹರಿದಷ್ಟು ಬದುಕು ತಿಳಿಯಾಗುತ್ತದೆ.

ಪ್ರೀತಿಗಿಂತ ಆಸ್ತಿಯಿಲ್ಲ, ಎಂಬುದು ಹೃದಯದ ಮಾತು. ಬದುಕಿನ ಕನಸುಗಳಿಗೆ, ಪ್ರೀತಿಗಿಂತ ದುಡ್ಡು ಬೇಕು ಎನ್ನುವುದು ಕಂಡುಕೊಂಡ ಸತ್ಯದ ಮಾತು.

ಆತ್ಮ ಶುದ್ಧಿಯೇ ಬದುಕಿನ ಗುರುತು ಎಂದ ಮನಸಿಗೆ ಬದುಕ ತತ್ವಗಳ ಹುಡುಕಾಟ.ಕನಸೆಂದರೆ ಹಠ ಗೆಲುವೆಂದರೆ ಬದುಕು ಎಂದು ಸಾಲು ಸಾಲು ಬರೆದ ಹುಚ್ಚಿಗೆ ಸೋಲುಗಳ ಕೈ ತುತ್ತು.

ಯಾರದೋ ಪ್ರೀತಿಯ ಮಾತುಗಳಿಗೆ ರೋಮಾಂಚನಗೊಂಡವಳಿಗೆ, ಪ್ರೀತಿಯ ಸವಿ ಹರಿಸಲು ಮಡಿಲಲ್ಲೊಂದು ನಗುವ ಹಸುಳೆ.

ಸುಮ್ಮನೆ ಬೇಸರವಾದಾಗಲೂ ಒಂದಷ್ಟು ದೂರ ನಡೆಯುತ್ತಿದ್ದವಳಿಗೆ ಸುಖಾಸುಮ್ಮನೆ ಕುಳಿತರೂ ಮೈಮನಕ್ಕೆಲ್ಲಾ ನೋವು.

೩೦ ಮುಗಿಯುತ್ತಿದ್ದಂತೆ ಬದುಕು ಎಷ್ಟೆಲ್ಲಾ ಬದಲಾಯಿತು ಏನೆಲ್ಲವನ್ನು ಕಲಿಸಿತು. ಮತ್ತೊಂದು ಪುಟಕ್ಕೆ ತೆರೆದುಕೊಳ್ಳುವ ಮುನ್ನ ನನ್ನೊಳಗೆ, ಒಂದಷ್ಟು ಆತ್ಮ ವಿಮರ್ಶೆಯಾಗಬೇಕು, ನನ್ನ ಜೊತೆ ನಾನು ಕೂತು ಮಾತನಾಡಬೇಕು, ನನ್ನ ಮಡಿಲಲ್ಲಿ ಮಲಗಿ ಒಂದಷ್ಟು ಸಾಂತ್ವನದ ಸವಿ‌ಸವಿಯಬೇಕು.  

೩೦ ವರುಷಗಳಿಂದಲೂ ನನ್ನೊಡನೆ ಬಂದ ಒಳಗಿನ ಮಗುವನ್ನು, ಹರೆಯದ ಕೂಸನ್ನು, ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಲು ಹೊರಟ ಹುಚ್ಚು ಹುಡುಗಿಯನ್ನ, ಒಲವ ಹೊಳೆಯಲ್ಲಿ ತಂಪಾದ ತಾಯಿಯನ್ನ ಒಮ್ಮೆ ನೊಡಿಕೊಳ್ಳಬೇಕು.

ನಗುವಿನ‌ ಹುಡುಕಾಟದ 
ಅದೇ ಅಭಿಸಾರಿಕೆ


Sunday 30 October 2022

ಮಗಳಿಗೆ...

ಮಗಳೆಂಬೊ ಮುದ್ದು ಗುಬ್ಬಿಗೆ..

ಶ್ರಾವಣದ ಕೊನೆಯ ಮಂಗಳವಾರ ಪುಟ್ಟ ದೇವತೆ ಒಬ್ಬಳು ಜನಿಸಿದಳು. ನನ್ನ ಬದುಕಿನ‌‌‌ ಅತೀ ಯಾತನೆಯ ಕ್ಷಣವೊಂದು ನಗುವಾಗಿ ಪರಿವರ್ತನೆಯಾಯಿತು. ಅಸಾಧ್ಯವಾದ ಗೆಲುವೊಂದು ದಕ್ಕಿದ ದಿನ‌‌ ಅದು. 

ಕಂದಾ...
ನೀನು ನನ್ನ ಜೀವನ‌ ಪ್ರೀತಿ, ಬದುಕುವ ಕಾರಣ. ನನ್ನ ಗೆಲ್ಲಿಸಿದಾಕೆ‌. ದಿನಗಳು ಕ್ಷಣಗಳಾಗಿ ಕಳೆಯುತ್ತಿವೆ. ನಿನ್ನ ಹೊರತಾಗಿ ಬದುಕಿಗೆ ಮತ್ತೇನು ಬೇಕಿಲ್ಲ ಎನಿಸುತ್ತಿದೆ. ಯಾವ ಸೋಲು‌ ಯಾವ‌‌ ಗೆಲುವು ದೊಡ್ಡದಲ್ಲ, ನಿನ್ನ ಅಳುವು ಮನಸ್ಸನ್ನು ತೀವ್ರವಾಗಿ ಸಂತೈಸುವ ಯಾವುದೋ‌ ಸಂಗೀತದಂತೆ. 
ಈಗೀಗಾ‌ ನೀನು ನಗುತ್ತಿಯಲ್ಲ‌ ಅದರಲ್ಲಿ ನನ್ನ ಉಸಿರೆ ಇದೆ ಎನಿಸುತ್ತಿದೆ. ನಿನಗಾಗಿ  ನನ್ನ ಉಸಿರ ಬಿಗಿ ಹಿಡಿದು ಬದುಕಿಬಿಡುವೆ ಬದುಕಿನೆಲ್ಲ ಏರಿಳಿತಗಳ ಹೊರತಾಗಿಯೂ...

ನಿನ್ನ ಬದುಕಿಗೆ ನೆರಳಾಗಿ ನಿನ್ನ ಕನಸಿಗೆ ಜೊತೆಯಾಗಿ, ನನ್ನ ಬದುಕ ಕೊನೆಯ ತನಕ ನಿನ್ನನ್ನು ಪ್ರೀತಿಸುತ್ತಲೇ ಇರುತ್ತೇನೆ. 

ನಿನ್ನ ಹೆಸರು ಸೀತೆಯ ಇನ್ನೊಂದು ಹೆಸರು ನೀನು ಅವಳಂತೆ ಎಂತಹ ಕಷ್ಟದಲ್ಲೂ ನೀನು ನೀನಾಗಿಯೆ ಇರಬೇಕು. 

ತುಂಬಾ ಪ್ರೀತಿ ‌ಮುದ್ದು ಮೈಥಿಲಿ...

Thursday 5 May 2022

ಜೀವ ನಿನ್ನಾಸರೆಗೆ ಕಾಯುತಿಹುದು...

ನನ್ನೊಳಗಿನ ಪುಟ್ಟ ಹೃದಯವೇ... 

ನನ್ನ ಬದುಕಿನ ದೊಡ್ಡ ಕನಸು ನೀನು, ನನ್ನೊಳಗೆ ನಿನ್ನ ಹೃದಯ, ನಿನ್ನ ಉಸಿರಾಟ, ನಿನ್ನ ಪುಟ್ಟ ಪಾದಗಳ ಸ್ಪರ್ಶ ಸುಖ. ನೀನು ನನ್ನ ಪುಟ್ಟ ಕಂದ. 

ಇನ್ನೊಂದು ಸ್ವಲ್ಪ ದಿನವಾದರೆ ನಿನ್ನ ಅಳು ನಗುವಿನ ಮೆರವಣಿಗೆ ನನ್ನ ಬದುಕಿನ ಹಬ್ಬದ ದಿನಗಳು ಪ್ರಾರಂಭ.  

ಇಷ್ಟು ದಿನ ಬದುಕಿದ ಬದುಕಿಗೆ ಖುಷಿ, ಸಾರ್ಥಕತೆ ಎಂದರೆ  ಅದು ನೀನು ಬರುತ್ತೀಯ ಎಂದಾದ ಮೇಲಿನ ಈ ದಿನಗಳು.  ಬದುಕ ಗೆಲುವಿನ ಹಠಕ್ಕೆ ಬಿದ್ದ ತೀರಾ ಭಾವುಕ ಮನಕ್ಕೀಗ, ಬದುಕುವ ನಿಜ ಕಾರಣ ಸಿಕ್ಕದ ಖುಷಿ. ಈ ಕಾರಣಕ್ಕಿಂತ, ಇನ್ಯಾವ ಕಾರಣವೂ ಬೇಕಿಲ್ಲ ಬದುಕಲು ನಂಗೆ. 

ಏನೆಂದು ಬರೆದಿಡಲಿ ಇಲ್ಲಿ? ಆದರೆ ಬರೆಯಲೇ ಬೇಕು ನನ್ನ ಬದುಕಿನ ಎಲ್ಲ ದ್ವಂದ್ವಗಳಿಗೆ, ಕನಸುಗಳಿಗೆ, ಕಿವಿಯಾದ ಈ ಅಭಿಸಾರಿಕೆಯ ಮಡಿಲಲ್ಲಿ ನಿನ್ನ ಬಗ್ಗೆ ಹೇಳದಿದ್ದರೆ ತಪ್ಪಾದೀತು. 

ನಿನ್ನ ಹೃದಯ ಬಡಿತ ಕೇಳಿದ ದಿನಗಳಿಂದ ನಿನ್ನ ಪುಟ್ಟ ಪಾದ ಸ್ಪರ್ಶವಾಗುತ್ತಿರುವ ಈ ಘಳಿಗೆಗಳು ನನ್ನ ಬದುಕಿನ ಅಮೂಲ್ಯ ಕ್ಷಣಗಳು. ಅಕ್ಷರಸಹ ಜೀವಿಸುತ್ತಿದ್ದೇನೆ ಈ ದಿನಗಳನ್ನು. 


ನಿನ್ನ ಬೆಳವಣಿಗೆಯಲ್ಲಿ ನಿನ್ನ ಕಲಿಕೆಯಲ್ಲಿ ನಾನು ಬದುಕುವ ಕಲಿಯುವ ಬಯಕೆ ಮನದ ತುಂಬಾ. ಆರೋಗ್ಯವಾಗಿರು ನನ್ನೊಳಗಿರುವ ಆ ಹೃದಯಲ್ಲಿ ನನ್ನ ಜೀವವೇ ಇದೆ. 

ಕಾಯುತ್ತಿರುವೆ ನಿನಗಾಗಿ....

Sunday 13 June 2021

'ಅಭಿಸಾರಿಕೆ'ಯ ಹುಟ್ಟುಹಬ್ಬ..

ನಾನು‌ ಎಂಬುದು ನನ್ನ ಸದಾಕಾಲಕ್ಕೂ ಬದುಕಿಸುವ ಜೀವ ಗಂಗೆ.. ಬದುಕಿನ‌ ಎಲ್ಲದರಾಚೆಗೆ ನಂಗೆ ಕಾಡುವುದು ಮಡಿಲಾಗುವುದು ನೀ ಮಾತ್ರ. ನನ್ನ ಅಭಿಸಾರಿಕೆ ನನ್ನ ಭಾವದ ಬಯಲು. 

ತುಂಬಾ ಬರೆಯಬೇಕು ಎಂತಲೇ ನೀನೆಂಬ ಕನಸಿಗೆ ಹೆಸರು ಕೊಟ್ಟಿದ್ದು. ಬರೆದದ್ದು ತುಂಬಾ ಕಡಿಮೆ. ಆದರೆ ಬರೆದಷ್ಟೂ ನಿನ್ನ ಮಡಿಲಲ್ಲಿ ಬಂದು ಹೇಳಿಕೊಂಡಂತಹ ನನ್ನ ಬದುಕಿನ ಶುಧ್ಧ ಭಾವಗಳೇ...

ನಿಂಗೆ ಗೊತ್ತಾ, ತುಂಬಾ‌ ನೋವಿರುವ ಜಾಗದಿಂದಾಗಲಿ ಇಲ್ಲ ತುಂಬಾ ಖುಷಿಯಿರುವ ಜಾಗದಿಂದಾಗಲಿ ಅಷ್ಟು ‌ಸುಲಭಕ್ಕೆ‌‌ ಎದ್ದು ಬರಬಾರದು. ಭಾವವೊಂದು ಮನದಲ್ಲಿ ಹೊಕ್ಕು ತೀವ್ರವಾಗಿ ಕಾಡಲೇಬೇಕು, ಅಷ್ಟು ಕಾಲ ಕೊಡದಿದ್ದರೆನೇ, ಮನಸ್ಸು ಪಾಪಪ್ರಜ್ಞೆಗೆ
ಬೀಳುವುದು. 

ಪ್ರತಿ ದಿನವೂ ಬೆಳಕು ಮೂಡುತ್ತದೆ ಆದರೆ, ಕತ್ತಲೆಯೂ ಬೆಳಕ ಬೆನ್ನಲ್ಲೇ ಅಂಟಿರುತ್ತದೆ ಎನ್ನುವುದ ಮರೆಯಬೇಡ. ಯಾರು ಹೇಳಿದ್ದು ಮನುಷ್ಯನ ಸಾವು ಒಂದೇ ಸಲ ಎಂದು ಭಾವ ಸತ್ತಾಗಲೆಲ್ಲ ಮನುಷ್ಯ ಸಾಯುತ್ತಾನೆ ಆದರೆ ಸತ್ತು ಮತ್ತೆ ಹೊಸದಾಗಿ ಹುಟ್ಟುತ್ತಾನೆ.  ನೋವಿರದ ದೇಹದ ಸಾವಿಗಿಂತ ಭಾವಗಳ ಸಾವು ಹೆಚ್ಚು ನೋವಲ್ಲವಾ? 
ನೋವು,ನಲಿವು ಪಾಪಪ್ರಜ್ಞೆ,ಭಯ, ನನ್ನೊಳಗಿನ ತರ್ಕ ಎಲ್ಲವೂ ಇಲ್ಲಿವೆ. ತುಂಬಾ ಬರೆಯಲಿಲ್ಲವೆಂದರೆ ಮನಸ್ಸು ಸ್ಥಿತ ಪ್ರಜ್ಞವಾಗಿದೆ ಎಂದಲ್ಲ. ಯಾಕೊ ನಿನ್ನೊಡಲಲ್ಲಿ ಹೇಳಿಕೊಳ್ಳಲು ಪದಗಳು ಇರಲೇ ಇಲ್ಲ. ಮೌನ ಮಾತಿಗಿಂತ ಖುಷಿಕೊಡುವ ಕಾಲಘಟ್ಟಕ್ಕೆ ಬಂದು ನಿಂತಿದ್ದೇನೆ ಎಂದರ್ಥವಾ? ಗೊತ್ತಿಲ್ಲ.

ನಿಜವೆಂದರೆ ನನ್ನೊಳಗಿನ ಗದ್ದಲವನ್ನು ಇಲ್ಲಿ ನಿನ್ನೊಡಲಿಗೆ ಇಳಿಸಿಬಿಟ್ಟರೆ ದೀರ್ಘ ಉಸಿರೊಂದನ್ನು ಬಿಟ್ಟಂತಹ ಸಮಾಧಾನ ನಂಗೆ.
ಅಭಿಸಾರಿಕೆ ಕೇವಲ ನನ್ನ ಭಾವ ಟಿಪ್ಪಣಿಯಾಗಲಿಲ್ಲ ನನ್ನ ನೋವಿಗೆ ಮಡಿಲಾಗಿ ಖುಷಿಗೆ ಪ್ರತಿಬಿಂಬವಾಗಿ ಬದುಕ ನೆನಪಿನ ಹೆಜ್ಜೆ ಗುರುತಾಗಿ ನನ್ನೊಂದಿಗಿದೆ.

 ನೀನೆಂದರೆ ತುಂಬಾ ಪ್ರೀತಿ ನಂಗೆ.
ಹುಟ್ಟಿದ ಹಬ್ಬದ ಶುಭಾಶಯಗಳು ಕಣೇ... ನಮ್ಮಿಬ್ಬ ಬೆಸುಗೆ ಗಾಢವಾಗಲಿ...ನಮ್ಮ ಹೂ ನಗೆಯ ಹುಡುಕಾಟ ನಿರಂತರವಿರಲಿ.

Friday 15 May 2020

ನಿನ್ನ ನಾಳೆಗಳಿಗೆ....

ಅದ್ವಿತ್ ಕಂದಾ.......  




ನೀ ಹುಟ್ಟಿ ಇಂದಿಗೆ ಒಂದು ವರುಷ ಒಂಭತ್ತು ತಿಂಗಳು  ಕಳೆದು ಹೋದವು. ಆದರೆ ಇಂದಿನ ಪರಿಸ್ಥಿತಿ ಇದೆಯಲ್ಲ ನಾನುಬರೆಯಲೇಬೇಕು. 

ನಿಂಗೆ ಇದೆಲ್ಲ ಇಂದು  ಅರ್ಥವಾಗದು. ಗೊತ್ತು ನಂಗೆ, ಆದರೆ ನಿನ್ನ ಸುತ್ತಲಿರುವ ನಮ್ಮಗಳ ಇಂದಿನ ಬದುಕು ಇದುವೇ. 

ಇವತ್ತಿಗೆ ನಾವೆಲ್ಲ ಮನೆಯಲ್ಲೇ ಬಂಧಿತರಾಗಿ ಸರಿ ಸುಮಾರು ೬೦ ದಿನಗಳಾದವು. ಹಕ್ಕಿಗಳಂತೆ ಹಾರಡಿಕೊಂಡು ಯಾವ ಮಿತಿಗಳಿಲ್ಲದೆ ಬದುಕುತ್ತಿದ್ದ ನಮ್ಮಗಳಿಗೆ ನಿಜಕ್ಕೂ ಈ ಬಂಧನ ಒಂಥರಾ ಕಷ್ಟವೇ ಸರಿ. 

ಈ ವರುಷ, ಪ್ರಾರಂಭದಿಂದಲೂ ಒಂದಷ್ಟು ಭಯ, ನೋವು-ನಿರಾಸೆಯನ್ನೇ, ಹೊತ್ತು ಬಂದಿದೆ. ಈ ಸಂವತ್ಸರಕ್ಕೆ ಹೆಸರು ಶಾರ್ವರಿ ಅಂತ. ಅಂದರೆ ಕತ್ತಲೆ ಎಂದರ್ಥವಂತೆ. ಹೆಸರು ಚಂದವೇ, ಆದರೆ ಈ ಯುಗಾದಿಯ ಆಚೀಚೆಯ ಕ್ಷಣಗಳಿವೆಯಲ್ಲ, ಅದು ಭಯಂಕರ. ವಿಕಾರಿ ಸಂವತ್ಸರ ಕಳೆದು ಶಾರ್ವರಿ ಬಂದಿದೆ. ವಿಕಾರಿಯ ಹೋಗುವ  ದಿನಗಳು ಹುಟ್ಟಿಸಿದ್ದು ಸಾವಿನ ಭಯಗಳನ್ನ. 

ನಿನ್ನ ಮುದ್ದು ಭಾಷೆಯಲ್ಲಿ ಹೇಳುವುದಾದರೆ ಇದೊಂದು ಕಣ್ಣಿಗೆ ಕಾಣದ ಗುಮ್ಮಾ. ಅದರ ಹೆಸರು ಕೊರೊನ, ಭಯ ಭೀಕರವಾದದ್ದು. ಇದು ಚೀನಾ ದೇಶದಿಂದ ಬಂದ ಸಾವಿನ ಬುತ್ತಿ. ಕಣ್ಣಿಗೆ ಕಾಣದ, ಆದರೆ ಅದೆಷ್ಟೋ ಜೀವವನ್ನೇ ತಿನ್ನುತ್ತಿರುವ ಸಧ್ಯದ ನರಭಕ್ಷಕ. ಚಿಕಿತ್ಸೆ ಇಲ್ಲದ, ಇದಕ್ಕೆ ನಾವುಗಳು ಹೆದರಿ ಕುಳಿತಿದ್ದೇವೆ. 

ದಿನ ನಿತ್ಯ ನಿಲ್ಲಲೂ, ಜಾಗವಿಲ್ಲದಂತೆ ಇರುವೆಗಳಂತೆಯೇ ಗಿಜಿಗುಡುತ್ತ ಇದ್ದ ಈ ಮಹಾನಗರಿ ಇಂದು ಅಕ್ಷರಶಃ ಖಾಲಿಯಾಗಿದೆ. ಹೊಗೆ, ಗಾಳಿ, ವಾಹನಗಳ ಶಬ್ದಕ್ಕೆ ನಿರ್ಜೀವವಾಗಿದೆ. ಒಂಥರಾ ಭೂಮಿ ನಿಲ್ಲುವುದನ್ನೇ ಮರೆತಂತೆ ಭಾಸವಾಗುತ್ತಿದೆ.  ಈ ನಗರಿ ಇಂದು ಕಂಡಕಂಡಲ್ಲಿ ಹೂ ಬಿಟ್ಟು ಚಂದಗೆ ನಿಂತಿದೆ, ಆದರೆ ಈ ಸೌಂದರ್ಯವ ಸವಿಯುವವರು ಯಾರು. ಸಾವಿನ ಭಯ ಯಾವ ಸುಖವನ್ನು ಆಸ್ವಾದಿಸಲು ಬಿಡುವುದಿಲ್ಲ ಅಲ್ಲವಾ?

ಮೌನ ಮತ್ತು ಖಾಲಿತನವಿದೆಯಲ್ಲ, ಅದು ನಮ್ಮನ್ನು ತೀರಾ ಆಂತರಿಕವಾಗಿ ಸುಟ್ಟು  ಬಿಡುತ್ತದೆ.  ಅರ್ಥವಾಗಿದ್ದು ಏನು ಗೊತ್ತ?ಮನುಷ್ಯ ಬದುಕುವ ಖಾಯಿಲೆಗೆ ಬಿದ್ದು ತನ್ನ ತನವನ್ನೇ ಮರೆತುಬಿಟ್ಟಿದ್ದ. ಆದರೆ ಈ ಕ್ಷಣವಿದೆಯಲ್ಲ, ನಾವು ಯಾರು? ನಮ್ಮ ಮೂಲ ಬಯಕೆ ಏನು? ಎಂದು ಜ್ಞಾಪಿಸುತ್ತಿದೆ. ದುಡ್ಡು,ಕೆಲಸ ಅಂತೆಲ್ಲ ಯಾವುದರ ಹಿಂದೆ ಎಂದೇ ಗೊತ್ತಿಲ್ಲದೆ ಓಡುತ್ತಲೇ ಇದ್ದೇವೋ,  ಒಂದೇ ಸಮನೆ ನಿಂತಲ್ಲೇ ನಿಂತು ಬಿಟ್ಟಂತಾಗಿದೆ. ಆದರೆ ವಿಚಿತ್ರವೆಂದರೆ ಈ ಜ್ಞಾನೋದಯಕ್ಕೆ ಕಾರಣ ಜೀವ ಭಯ. ನಗರ ನಮ್ಮನ್ನು ಸೆಳೆಯುವುದೇ ಈ ಜೀವಂತಿಕೆಯ ಮುಖವಾಡದಿಂದ. ಆದರೆ ಇಂದು ಮುಖವಾಡಗಳಿಲ್ಲದೇ ತಲೆ ತಗ್ಗಿಸಿ ನಿಂತಿದೆ. 

ಮನುಷ್ಯನ ಬದುಕಿಗೆ ನೆಮ್ಮದಿ,ಪ್ರೀತಿ, ಸಹಬಾಳ್ವೆಯೇ ಮುಖ್ಯ. ದ್ವೇಷದಿಂದ,  ಅಸೂಯೆಯಿಂದ ಕಲಿಸಲಾಗದನ್ನು, ಈ ಕಾಲವೇ ಕಲಿಸಿದೆ. ಆದರೆ ನಾವುಗಳು ಎಷ್ಟು ಕಲಿಯುತ್ತೇವೆ? ಯಾರಿಗೆ ಗೊತ್ತು!!!

ಒಂದು ಕಡೆ ಸೋಂಕಿನ ಸಂಖ್ಯೆ ಏರುತ್ತಲೇ ಇದೆ. ಇನ್ನೊಂದು ಕಡೆ ಸಾವಿನ ಸಂಖ್ಯೆಯೂ... ಆದರೆ ಮತ್ತೊಂದು ಕಡೆ ಜನ ಸಾವನ್ನು ಗೆದ್ದ ಮೃತ್ಯುಂಜಯರಂತೆ ಓಡಾಡಿಯುತ್ತ, ಮೈ ಮರೆಯುತ್ತಿದ್ದಾರೆ. ಸರ್ಕಾರ ಯೋಜನೆಯ ಹೆಸರಲ್ಲಿ, ಕಾನೂನಿನ ಹೆಸರಲ್ಲಿ,  ನಮ್ಮ ರಕ್ಷಣೆಗೆ ನಿಂತರೆ ನಾವಿಲ್ಲಿ ಜೀವದ ಹಂಗು ಇಲ್ಲದೆ ತಿರುಗುತ್ತಿದ್ದೇವೆ. 

ಕಂದಾ.. 

ಇದನಂತೂ ಹೇಳಲೇಬೇಕು. ಪೊಲೀಸರು, ಡಾಕ್ಟರ್, ಸ್ವಚ್ಛಮಾಡುವವರು, ಇಂದಿನ ನಿಜವಾದ ದೇವರು. ನಮ್ಮಗಳ ಬದುಕಿಗಾಗಿ, ನಮ್ಮ ನಾಳೆಗಳಿಗಾಗಿ ಅವರು ಸಲ್ಲಿಸುತ್ತಿರುವ ಸೇವೆಯನ್ನ ನಾವು ನೆನೆಯಲೇಬೇಕು. 

ನಾವಿಲ್ಲಿ ಮನೆಯಲ್ಲೇ ಬಂಧಿತರಾಗಿದ್ದೇವೆ. ನಿಂಗೆ ಬೇಸರ ನಾಲ್ಕು ಗೋಡೆಯ ಮಧ್ಯೆ ಇದ್ದು ನಮಗೂ ಬೇಸರವೇ. ಹೇಳಿಕೊಳ್ಳಲು ಬಾರದ ನೀನು, ಮತ್ತೆ ಹೇಳುತ್ತಲೇ ಒಪ್ಪಿಕೊಂಡು ಬದುಕಬೇಕಾದ ನಾವುಗಳು. 

ಸತ್ತೇ ಹೋಗಿಬಿಡುತ್ತೇವೆ ಅಂತಲ್ಲ... ಆದರೆ ನಮ್ಮ ನಾವು ಕಾಯ್ದುಕೊಳ್ಳದಿದ್ದರೆ ಇಲ್ಲೇ ಎಲ್ಲೋ ಸುಳಿದಾಡುತ್ತಿರುವ ಸಾವು ಬಂದು ತಬ್ಬಿಯೇ ಬಿಡುತ್ತದೆ. 

ಯುದ್ಧದ ದಿನಗಳ ಕಾಣದ ನಾವು ಇದೊಂದು ಹೊಸ ದಿಗ್ಬಂಧನಕ್ಕೆ ಸಿಕ್ಕಿಕೊಂಡಿದ್ದೇವೆ.  

ನೀನು ದೊಡ್ಡವನಾದ ಮೇಲೆ ಇದನೆಲ್ಲ ಓದಲಿ ಮತ್ತು ನಿನ್ನ ತಲೆಮಾರಿಗೆ ಇದು ಇತಿಹಾಸದಲ್ಲಿ ಮಾತ್ರ ಇರಲಿ, ಎಂಬ ಆಶಯ ಅಷ್ಟೆ.  ಈ ಜೀವಭಯ ನಮ್ಮಗಳಿಗೇ ಮುಗಿದು ಹೋಗಲಿ ಮತ್ತು ಇಂದಿನ ನಮ್ಮ ಬದುಕಿನ ಪಾಠಗಳು ನಿನಗೆ ಕಲಿಕೆಯಾಗಲಿ ಅಂತಷ್ಟೇ. 




Wednesday 22 April 2020

ಒಳಗಿನ ಕಿವಿಗೊಂದು ಕಿವಿಮಾತು

ಮನಸೇ... 

ಇದು ಅಂತ್ಯಂತ ಕಷ್ಟ ಕಾಲ ಮನುಷ್ಯ ಮನುಷ್ಯನ ಮುಖ ನೋಡಲು, ಪ್ರೀತಿಯ ಹಸ್ತ ನೀಡಲೂ ಭಯ ಪಡುತ್ತಿರುವ ಭಯಾನಕ ಕ್ಷಣಗಳು. ಎಲ್ಲವನ್ನೂ ಗೆದ್ದೇ ಎಂದು ಬೀಗುತ್ತಿದ್ದವನಿಗೆ ಸಾವನ್ನು ಗೆದ್ದಿಲ್ಲ ಎಂಬ ಆತ್ಮ ವಿಮರ್ಶೆಯ ಕಾಲ. 

ನಾವುಗಳು ಅದೆಷ್ಟು ಬೀಗುತ್ತಿದೆವು. ಎಲ್ಲವನ್ನೂ ಮುಷ್ಟಿಯಲ್ಲಿ ಬಿಗಿಹಿಡಿಯಬಲ್ಲೆವು ಎಂಬ ಭ್ರಮೆಯಲ್ಲಿ. ಯಾರೂ ಇಲ್ಲದೆಯೂ ಬದುಕಬಲ್ಲೆವು ಎಂಬ ಹುಚ್ಚು ಧೈರ್ಯದಲ್ಲಿ. ಗಗನಕ್ಕೆ ಹಾರುತ್ತೇವೆ ಎಂದು ಭುವಿಯೆಡೆಗೆ ನಿರ್ಲಕ್ಷ ತೋರುವಷ್ಟು, ಅದೆಷ್ಟು ಬ್ಯುಸಿ ಆಗಿದ್ದೆವು ಸಂಬಂಧಗಳ ಮರೆವಷ್ಟು, ಅದೆಷ್ಟು ಅಹಂ ಭಾವ. ಅಹಂ ಸರ್ವಂ. 


ಆದರೆ ಈ ಕ್ಷಣ, ನಾಳೆಗಳ ಕಲ್ಪನೆಯೇ ಇಲ್ಲ ಕನಸುಗಳ ಕಾಣಲೂ ಭಯ, ಕನಸ ಕಟ್ಟಿಕೊಂಡು ಮಾಡುವುದೇನಿದೆ. ಇಂದು ಈ ಕ್ಷಣ ಅಂತ ಬದುಕಬೇಕು. ಯಾವ ಕ್ಷಣದಲ್ಲಿ ಯಾವ ರೋಗ ಬಂದು ಯಾರ ಬಲಿಪಡೆಯುತ್ತದೋ, ಕಂಡವರು ಯಾರು? ನಾವು ಬೀಗಿದ, ಖುಷಿಯಿಂದ ಓಡಾಡಿದ ರಸ್ತೆಗಳಲ್ಲಿಇಂದು  ನಡೆಯಲೂ ಹಿಂಜರಿಯಬೇಕು. ಇಷ್ಟೊಂದು ಜನಗಳ ಕಂಡು ಅಚ್ಚರಿ ಪಟ್ಟ ನನ್ನದೇ ಕಣ್ಣುಗಳೂ, ಇಂದಿನ ರಸ್ತೆಗಳ ಖಾಲಿತನಕ್ಕೆ, ಮೌನಕ್ಕೆ ಹೆದರಿ ನಡುಗಿ ಹೋಗಿದೆ. ಇದು ಇನ್ನೆಷ್ಟು ದಿನ ಎಂಬ ಉತ್ತರವಿಲ್ಲದ ಪ್ರಶ್ನೆಯ ಮತ್ತೆ ಮತ್ತೆ ಕೇಳಿಕೊಂಡು ಸೋತು ಹೋಗಿದೆ.ಎಷ್ಟೊಂದು ಮುಖವಾಡಗಳ ಹೊತ್ತು ಬದುಕುತ್ತಿದ್ದೆವು ನಾವು, ಇಂದು ಯಾವುದೂ ಇಲ್ಲ ಮನುಷ್ಯ ತನ್ನವರನ್ನು ಕಾಪಾಡಿಕೊಳ್ಳಲು ಅದೆಷ್ಟು ಹೋರಾಡುತಿದ್ದಾನೆ. ಯುಧ್ಧ, ಭಯೋತ್ಪಾದನೆಯಲ್ಲಿ ಇರದ ಜೀವ ಭಯವನ್ನು ಈ ರೋಗ ಹುಟ್ಟುಹಾಕಿದೆ. 

ಹೇ ನನ್ನೊಳಗಿನ ಕಿವಿಯೇ... 

ಇದರಿಂದ ಒಂದಷ್ಟು ಬದುಕ ಪಾಠ ಕಲಿಯಬೇಕು ನೀನು. 

ನೆನಪಿಟ್ಟುಕೋ ನೀನು ಒಂದು ಪುಟ್ಟ ಜೀವ ಇಲ್ಲಿ ನಿನಗಿಂತ ಅವಶ್ಯಕವಾಗಿದ್ದು ಸಾವಿರವಿದೆ.  ಅಷ್ಟಕ್ಕೂ, ನೀನು ಭುವಿಗೆ ಅವಶ್ಯಕತೆಯೇ ಅಲ್ಲ. ಇಲ್ಲಿ ಇರುವಷ್ಟೂ ದಿನ ಪ್ರೀತಿ ಸ್ನೇಹಗಳ ನೀಡುಕೈಯಾಗಿರು ನಾನೇನು ಪಡೆದೆ ಎಂದು ಯೋಚಿಸುವ ಅವಶ್ಯಕತೆ ಇಲ್ಲ, ಯಾಕೆಂದರೆ ನಿನ್ನ ಹುಟ್ಟು ಪಡೆಯಲಲ್ಲ, ಕೊಡಲು. ನಿನ್ನ ಕೈಲಾದ ಸಹಾಯ ಮಾಡು.  ಹಾ,! ಸಹಾಯವೆಂದರೆ ಬರಿಯ ದುಡ್ಡಿನದಲ್ಲ. ನೊಂದವನಿಗೆ ಬರಿಯ ದುಡ್ಡಿನ ಅವಶ್ಯಕತೆ ಇರುವುದಿಲ್ಲ. ಮನುಷ್ಯನ ಸಾವಿಗೆ ಒಂದು ಕಾರಣ ಭಾವಗಳ ಹಸಿವೂ ಇದ್ದಿತು. ಮರು ಪ್ರೀತಿಯ ಹಂಬಲವಿಲ್ಲದೇ ಪ್ರೀತಿ ಕೊಡು, ಇಲ್ಲಿ ಕೊಟ್ಟ ಪ್ರೀತಿ ಇನ್ನೆಲ್ಲಿಂದಲೋ ನಿನ್ನೆಡೆಗೆ ಅನಾಯಾಸ ಹರಿದು ಬಂದೀತು, ಬರುತ್ತೆ.  ಎಲ್ಲೋ ಸಿಗುವ ಯಾರನ್ನೋ ಪ್ರೀತಿಸಬೇಕಂತಲ್ಲ, ಕಡೆಗೆ ನಿನ್ನವರನ್ನ ನಿನ್ನ ಸುತ್ತಲಿರುವವರನ್ನು ಪ್ರೀತಿಸುವ ಶ್ರೀಮಂತಿಕೆ  ಬರಲಿ.

ಹೊರಗೆ ಕಾಲಿಟ್ಟರೆ ರೋಗ ಅಂಟುವ ಈ ದಿನಗಳಲ್ಲಿ ಮನೆಯಲ್ಲೇ ಕುಳಿತು ದಿನಗಳ ಲೆಕ್ಕಹಾಕುತ್ತಿರುವ ನಿಂಗೆ ಮನಸಿನ ರೋಗ ಅಂಟದಿರಲಿ ನಿನ್ನೊಳಗಿನ ಭಾವ ಗಂಗೆ ಪ್ರೇಮದ ರೂಪ ಪಡೆದು ಧುಮ್ಮಿಕ್ಕಲಿ. 

Sunday 22 March 2020

ಒಳಗಿನಲೆ.....

ಹೇ ಆತ್ಮಸಖನೇ.. 

ಒಂದಷ್ಟು ಪ್ರಶ್ನೆಗಳಿವೆ ನಂಗೆ....

ಹುಟ್ಟಿದೊಡನೆಯೇ ಸಾವೂ ನಿಶ್ಚಯ, ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ ಆದರೂ ಯಾಕೆ ಈ ನೋವು ನಲಿವಿನ ಹುಡುಕಾಟದ ಹುಚ್ಚು. ಯಾಕೆ ಉಸಿರಿರುವ ತನಕ ಸುಮ್ಮನೆ ಬದುಕಲಾಗದು.  ಅಮೃತವನ್ನ  ಕುಡಿದು ಬಂದವರಂತೆ  ಬದುಕುವ ಆಸೆ ಯಾಕೆ? ಆತ್ಮಕ್ಕೆ ಸಾವಿಲ್ಲವಂತೆ ಅಂದರೆ ದೇಹದ ಕಾಳಜಿ ಏಕೆ? ಆತ್ಮ ಅಶುದ್ಧವಾಗದಂತಲ್ಲವಾ ಕಾಯ್ದುಕೊಳ್ಳಬೇಕಾಗಿರುವುದು. ಉಸಿರು ಹೋದಮೇಲೆ ಸುಟ್ಟು  ಬಿಡುವ ದೇಹದ ಬಗ್ಗೆ ಈ ಪರಿಯ ಕಾಳಜಿ ಯಾಕೆ?  

ನಾವುಗಳು ಇಷ್ಟೊಂದು ಪ್ರೀತಿಸುತ್ತೇವೆ ಎಂದಾದರೆ ಅತ್ಮಕ್ಕಿಂತ ದೇಹವೇ ಮುಖ್ಯವಾ? ಇಲ್ಲವೆಂದಾದರೆ ಯಾಕೆ ವ್ಯಕ್ತಿಯನ್ನು ಆತ್ಮಶುದ್ಧಿಯಿಂದ ಅಳೆಯದೇ ಬರಿಯ ದೇಹದ ಸೌಂದರ್ಯದಿಂದ ಮೆಚ್ಚಿಕೊಳ್ಳುವುದು. 

ಒಂದಿನ ಹಿಂಗೊಂದು ಪ್ರಶ್ನೆ ಕೇಳಿದ್ದೆ ಗುರುಗಳಲ್ಲಿ, ಧರ್ಮರಾಜ ಸತ್ಯವಂತ,ನೀತಿವಂತ ಮಾತಿಗೆ ತಪ್ಪದವ, ತಪ್ಪನ್ನೇ ಮಾಡದವ ಆದರೆ ಕೃಷ್ಣನ ಆಪ್ತ ಗೆಳೆಯ ಪಾರ್ಥ. ಕೃಷ್ಣ ಹೇಳಿದಂತೆ ಕೃಷ್ಣ ತನ್ನನ್ನು ಕಂಡುಕೊಂಡಿದ್ದು ಒಬ್ಬ  ಸಾಮಾನ್ಯ ಕೋಪ-ತಾಪಗಳಿರುವ, ಅತೀ ಸಾಮಾನ್ಯ ಮನುಷ್ಯನಾದ ಅರ್ಜುನನಲ್ಲಿ. ಅಂದರೆ ದೈವತ್ವವಿರಿದು ಧರ್ಮಜನಲ್ಲೋ ಅಥವಾ ಅರ್ಜುನನಲ್ಲೋ? 

ಒಬ್ಬ ಮನುಷ್ಯನ ಸಾಮಾನ್ಯ ಗುಣಗಳು ಎಂದರೆ ಏನು?  ಧರ್ಮಜನಂತೆ ಸಮಚಿತ್ತದ ಮನಸಾ?  ತಪ್ಪೇ ಮಾಡದ ಯಾವುದಕ್ಕೂ ಭಾವನಾತ್ಮಕವಾಗಿ ಅಭಿವ್ಯಕ್ತಿಯೇ ಇಲ್ಲದ ಯುಧಿಷ್ಠಿರನ? ಇಲ್ಲ   ಅರ್ಜುನನಂತೆ ಸಿಟ್ಟು ಸೆಡವು ಪ್ರೀತಿಯ ಸಾಮಾನ್ಯ ಗುಣಗಳ? 

ಇನ್ನು ಅರ್ಜುನನಂತೆ ಭಾವಗಳ ಜೊತೆ ಬದುಕುವುದೇ ದೇವರ ಸ್ವರೂಪ ಎಂದಾದರೆ ನಾವುಗಳು ಸತ್ಯ ಧರ್ಮದ ಹುಡುಕಾಟ ಮಾಡುತ್ತ ಅದರ ಪರಿಮಿತಿಯಲ್ಲಿ ಮನುಷ್ಯನನ್ನು  ಒಳ್ಳೆಯವನು ಕೆಟ್ಟವನು ಎಂದು ತಕ್ಕಡಿಯಲ್ಲಿಟ್ಟು ತೂಗುವುದು ಎಷ್ಟು ಸರಿ?

ಕೃಷ್ಣ ರಾಧೆಯನ್ನು ಮದುವೆ ಆಗಬೇಕು‌ ಎಂದಾಗ ಅವನ‌‌ ಗುರುಗಳು ಹೇಳಿದ್ದರಂತೆ, ನಿನ್ನ ಹುಟ್ಟಿನ ಕಾರಣ ಬೇರೆಯೇ ಇದೆ. ನೀನು ಪ್ರಪಂಚದ ಪ್ರೇಮವಾಗಬೇಕು ಬರಿಯ ರಾಧೆಗೆ ಸೀಮಿತವಾಗಬಾರದು ಎಂದು. ಬರಿಯ ಕೃಷ್ಣನ‌ ಹುಟ್ಟಿಗೊಂದೇ ಕಾರಣಗಳಿರಲಾರದು ನಮ್ಮಂತ ಸಾಮಾನ್ಯ ಜೀವಿಯ ಸೃಷ್ಟಿಗೂ ಕಾರಣಗಳಿರಬಹುದು ಅಲ್ಲವಾ? ತಪ್ಪು ಸರಿಗಳೆರಡನ್ನೂ ನಮ್ಮಿಂದಲೇ ನಡೆಯುತ್ತವೆ ಎಂದಾದರೆ ಇದೂ ಸೃಷ್ಟಿಯ ಕಾರಣಗಳೇ ಇರಬಹುದಾ?

ದೈವವೇ...

ಪ್ರಶ್ನೆಗಳು ಸಾವಿರ ನನ್ನೊಳಗೆ ಆದರೆ ನಿನ್ನೆಡೆಗಿನ‌ ನಂಬಿಕೆ ನನ್ನನ್ನು ಮಡಿಲಲ್ಲಿ ಮಲಗಿಸಿ ಸಮಾಧಾನ‌ ಮಾಡಿಬಿಡುತ್ತದೆ.ಬಹುಶಃ ದ್ವಂದ್ವಗಳಿಗೆಲ್ಲ ಉತ್ತರ ನಿನ್ನ ಸ್ಮರಣೆ ಮಾತ್ರ‌ ಇರಬಹುದು.

ಈ ಸರಿ ತಪ್ಪುಗಳ ಪ್ರಪಂಚದಲ್ಲಿ ಮನುಷ್ಯನನ್ನು ಇದ್ದಂತೆ ಒಪ್ಪಿಕ್ಕೊಳ್ಳದೇ ಒಳ್ಳೆಯವನು ಕೆಟ್ಟವನು ಎಂದೆಲ್ಲ ಯೋಚಿಸುತ್ತ ನಿಜ ಸ್ವಭಾವನ್ನೇ ಮರೆತು ಬದುಕುವುದು ಎಷ್ಟು ಸರಿ?