Monday, 11 November 2024

ಸುಮ್ಮನೆ ನಿಂತು ಬದುಕಿನೊಡುತ್ತ....

ಮನವೇ...,

ನಾನು ಯಾರು? ಎಂದು ಮತ್ತದೆ ಮಹಾನಗರಿಗೆ ಬಂದು ಪ್ರಶ್ನೆ ಕೇಳುವ, ಉತ್ತರವ ಹುಡುಕಿ ಹೊರಡುವ ಕಾಲ ಬಂದಿದೆ. ಬದುಕು ಒಂದಷ್ಟು ವರುಷಗಳ ನಂತರ ಮತ್ತೆ ಎಲ್ಲಿಂದ ನನ್ನ ಅಸ್ತಿತ್ವವ ಹುಡುಕ ಹೊರಟಿದ್ದೆನೋ ಅಲ್ಲಿಗೆ ತಂದು ನಿಲ್ಲಿಸಿದೆ.  

ಇಲ್ಲಿ ನಂಗೆ ನಾನು, ಪ್ರಶ್ನೆ ಕೇಳುತ್ತ, ಉತ್ತರವ ಹುಡುಕುತ್ತ, ಅಥವಾ ಉತ್ತರವ ಹುಡುಕುವ ನೆಪದಲ್ಲಿ ಬದುಕುತ್ತ, ನಡೆಯುತ್ತ, ಜೀವಂತಿಕೆಯನ್ನು ಕಂಡವಳು ನಾನು. ನಂಗೆ ಬದುಕುವ ಹುಚ್ಚು ಮತ್ತು ಬದುಕಿನೆಡೆಗೆ ಅತೀವ ಕುತೂಹಲ ಎರಡು ಇದೆ ಮತ್ತು, ಇದೇ ನನ್ನನ್ನು ಸದಾಕಾಲಕ್ಕೂ ಬದುಕಿಸುತ್ತ ಜೀವಂತವಾಗಿಸುತ್ತ ಬಂದಿದೆ. 

ಯಾಕೆ ಬದುಕಬೇಕು? ಎನ್ನುವ ಪ್ರಶ್ನೆಗೆ ನಂಗೆ ಉತ್ತರ ಯಾವಾಗಲು ನಾನೇ ಆಗಿದ್ದೇನೆ ಮತ್ತು ನನ್ನ ಬದುಕುವ ಹುಚ್ಚಿಗೆ ಕಾರಣವೂ ನಾನೇ ಆಗಿದ್ದೇನೆ. 

ಆದರೆ, ಇಂದು ಅಸ್ತಿತ್ವದ ಹುಡುಕಾಟವಿಲ್ಲ ನಂಗೆ, ನಾನು ಯಾರು ಗೊತ್ತು. ಗಟ್ಟಿಯಾಗಬೇಕು, ಗೆಲ್ಲಬೇಕು, ಗೆದ್ದು ಯಾರಿಗೊ ಬದುಕನ್ನು ಉತ್ತರವಾಗಿ ನೀಡಬೇಕು ಎನ್ನುವ ಭಾವವಿಲ್ಲ. ನನ್ನ ಬದುಕು ಯಾರಿಗಾಗೊ ಅಲ್ಲ ಇಲ್ಲಿ ನಾನು ಮಾತ್ರ. ಸಾವಿನ ಬಗ್ಗೆ ಕುತೂಹಲವಾಗಲಿ, ಭಯವಾಗಲಿ ಇಲ್ಲ. ಬರುವಾಗ ಸಾವು ಬಂದು ಅಪ್ಪಬಹುದು. ನಾಳೆ ಸೋತರೆ!, ಯಾರೊ ನಕ್ಕಾರು ಎಂಬ ಭಯವಿಲ್ಲ ಸೋತಾಗ ಯಾರಿದ್ದರೆನು ಎಂಬ ಉಡಾಫೆ ಮನಕ್ಕೆ. ಮತ್ಯಾವ ಭಾವ ಕಾಡಲು ಸಾಧ್ಯ? ನನ್ನ ಕನಸುಗಳ? ಕನಸುಗಳು  ಮರೆತುಹೋಗಿವೆ ಹಳೆಯ ನೆನಪುಗಳು ಉಳಿದಿಲ್ಲ. ಅಲ್ಲಿಗೆ ಬದುಕಿಗೆ ಇಂದು ಈ ಕ್ಷಣ ಮಾತ್ರ ಮುಖ್ಯ. ನಾನಿಲ್ಲಿ ನನ್ನ ಬದುಕಿನ ಏಳು ಬೀಳಿನ ಜೊತೆ ನಾನು ನಿಲ್ಲಬಲ್ಲೆನೆಂದರೆ ಅದು ಇಂದಿನ ಗೆಲುವು. ನೋವಿಗೆ ಕುಗ್ಗದೆ ಅತೀ ಭಾವುಕನಾಗೊ ಭಯಕ್ಕೆ ಬಿದ್ದೊ ಸಮಸ್ಯೆಯಿಂದ ಓಡಿಹೋಗದೆ ನಿಲ್ಲಬಲ್ಲೆನು ಎಂದರೆ ಈ ಕ್ಷಣದ ಗೆಲುವು. 

ಬದುಕು ಕಲಿಸಿದ ದೊಡ್ಡ ಪಾಠ ಅದುವೇ ನಿಲ್ಲಬೇಕು... ನಾನು ಇಲ್ಲೆ ನಿಲ್ಲಬೇಕು ಸುತ್ತಲಿನ ಪ್ರಪಂಚದಲ್ಲಿ ಏನೆ ಆಗುತ್ತಿದ್ದರೂ ನಾನು ಇಲ್ಲೆ ನಿಲ್ಲಬೇಕು. ಭಯಕ್ಕಲ್ಲ ನಿಂತಿದ್ದು, ಭಂಡ ಧೈರ್ಯಕ್ಕೆ ಏನಾಗುತ್ತದೆ ನೋಡೊಣ ಎಂಬ ಹುಚ್ಚಿಗೆ. 

ಮಹಾನಗರವನ್ನು ತುಂಬ ಪ್ರೀತಿಸುವ ನಂಗೆ ಇಂದು‌ ಅಸ್ತಿತ್ವದ ಹೋರಾಟದ ಹುಚ್ಚು ಇಲ್ಲ. ಸುಮ್ಮನೇ ಸೋಲುವ ಸುಸ್ತು ಇಲ್ಲ. ನಿಂತು ಸುಮ್ಮನೆ ನಿಂತು ಎಲ್ಲವನ್ನೂ ನೋಡಿಯೂ ಏನು ಅರಿಯದಂತೆ ಏನೂ ಅರ್ಥವಾಗದಂತೆ ನಗದಂತೆ ಅಳದಂತೆ ಸುಮ್ಮನೇ ನಾನು ನಾನಾಗಿ ನಿಂತುಬಿಡುವ ಆಸೆ‌. 

ಈ ಸುಮ್ಮನೆ ನಿಲ್ಲುವುದಿದೆಯಲ್ಲ, ಅದರಿಂದ ಎಷ್ಟೊಂದು ಹಿತವೆಂದು ಅರಿಯುವ ಆಸೆ ನಂಗೆ. ಯಾವ ಭಾವ ತೀವ್ರತೆಯು ಇಲ್ಲದೆ ಕೇವಲ ನಂಗೆ ನಾನಾಗಿ ಬದುಕುವ ದಾರಿ ಬಂದಂತೆ ಬದುಕ ಸ್ವೀಕರಿಸುವ ಸುಮ್ನನೆ ಬದುಕುವ ಆಸೆ ನಂಗೆ. ಮೊದಲೆಲ್ಲ ಅನಿಸುತ್ತಿತ್ತು, ಸುಮ್ಮನೆ ಬದುಕುವುದೆಂದರೆ ಸತ್ತಂತೆ ಭಾವ ತೀವ್ರತೆಯೆ ಬದುಕು ಎಂದು. ಆದರೆ ಬದುಕು ಕೊಟ್ಟ ಅತೀ ದೊಡ್ಡ ಪಾಠ ಸುಮ್ಮನೆ ನಿಂತುಬಿಡು ಬದುಕಿಗೂ ಸಮಯಬೇಕು ಬದುಕಲು... ಸಂತೆಯ ಮಧ್ಯದಲ್ಲಿ ನಿಂತಲ್ಲೆ ನಿಂತು ಓಡುವ ಬದುಕನ್ನು ನೋಡುತ್ತ ಬದುಕುವ ಆಸೆಯನ್ನೂ ಜೀವಂತಿಸಿಕೊಂಡಿದ್ದೇನೆ. ಮನಸೊಂದಷ್ಟು ದಿನ ಈ ಖಾಲಿತನವನ್ನು ತುಂಬಿಕೊಳ್ಳಲಿ...


ನಂಗೆ ನಾನು ಮತ್ತೆ ಮತ್ತೆ ಸಿಗಲಿ ಎಂಬುದೊಂದು ಆಸೆ.

ಅಭಿಸಾರಿಕೆ

Monday, 22 July 2024

ಬದುಕನ್ನು ಬದುಕಿ ನೋಡುವ ಸಮಯ

 ಹೇ, 

ತುಂಬಾ ದಿನಗಳ ಮೇಲೆ ಮತ್ತೆ ಬರೆಯುವ ಆಸೆಯಾಗಿದೆ. ಮೊದಲೆಲ್ಲ ಅಭಿಸಾರಿಕೆ ಎಂದರೆ ನನ್ನ ನೋವಿಗೆ ನಲಿವಿಗೆ ನನ್ನ ಒಂಟಿತನಕ್ಕೆ ನನ್ನ ಮನಸಿನ ಯಾವುದೇ ಭಾವಕ್ಕೂ ಕೇಳುವ ಕಿವಿ ಮತ್ತು ಸಮಾಧಾನದ ಮಡಿಲಾಗಿತ್ತು. ಒಂದಷ್ಟು ಕಾಲಗಳ ಕಾಲ ಇಲ್ಲಿ ಬರೆದು ನನ್ನೆಲ್ಲ ಭಾವಕ್ಕೆ ದಾರಿ ಮಾಡಿಕೊಟ್ಟೆ. ಒಂದಷ್ಟು ಕಾಲ ನಂಗ್ಯಾವ ಭಾವವು ಕಾಡುತ್ತಿಲ್ಲ ಎಂದು ಸುಳ್ಳು ಸಮಾಧಾನ ಮಾಡಿಕೊಂಡು ಮುಖವಾಡದ ಬದುಕ ಹೊತ್ತೆ, ಈ ಕ್ಷಣಕ್ಕೆ ಭಾವಗಳನ್ನ ಇದ್ದಂತೆಯೇ ಹೇಳಬಲ್ಲ ಮತ್ತು ಹೇಳಿದ್ದನ್ನು ಹೇಳಿದಂತೆಯೇ ಅರ್ಥೈಸಿಕೊಳ್ಳಬಲ್ಲ ಜಾಗ ಒಂದು ಸಿಕ್ಕಿದೆ ಅದೇ ನನ್ನ ಥೆರಪಿ ರೂಮ್. 

ಇಲ್ಲಿ ಹೇಳುವ ಮಾತನಾಡುವ ಯಾವುದು ನನ್ನ ಕಿವಿ ಥೆರಪಿಸ್ಟ್ ಕಿವಿ ಬಿಟ್ಟು ಇನ್ನೆಲ್ಲೂ ಹೋಗುವುದಿಲ್ಲ ಅದಕ್ಕೆ ಅದು ಸುರಕ್ಷಿತ ಜಾಗ. 

ಸುಮಾರು ವರ್ಷಗಳ ಹಿಂದೆ ಮನಸು ಇಲ್ಲದ ಮಾರ್ಗ ಎನ್ನುವ ಒಂದು ಪುಸ್ತಕ ಒಂದಿದ್ದೆ, ಅದನ್ನು ಓದಿ ಒಂದಷ್ಟು ದಿನಗಳ ಕಾಲ ಸಿಟ್ಟೇ ಮಾಡಿಕೊಳ್ಳದೆ ಬದುಕಿದ್ದೇ. ಆದರೆ ನಿಜವಾದ ಥೆರಪಿ ಸಿಟ್ಟೇ ಬರದಂತೆ ತಡೆಯುವುದಿಲ್ಲ ನಾನು ನಾನಾಗಿ ಬದುಕಲು ಕಲಿಸುತ್ತದೆ. ಥೆರಪಿಗೆ ಹೋಗಲು ಮಾನಸಿಕ ಸಮಸ್ಯೆಯೆ ಬೇಕೆಂದಿಲ್ಲ. ಹಾಗೆ ನೋಡಿದರೆ ಎಲ್ಲರಿಗು ಒಂದಲ್ಲ ಒಂದು ಮಾನಸಿಕ ಸಮಸ್ಯೆ ಇದ್ದೆ ಇರುತ್ತದೆ. ಸ್ಥಿತ ಪ್ರಜ್ಞನಾಗಿರುವುದು ಎಂದರೆ ಅವರು ಮಾನಸಿಕ ಸಮಸ್ಯೆ ಇಂದ ಹೊರಬಂದವರು ಎಂದಲ್ಲ. ಬೇರೆಯವರು ಅಳುತ್ತಾರೆ ಮತ್ತು ಅಳುವದು ತಪ್ಪು ಎಂದು ಹೇಳುವವರಿಗೆ ಅಳುವುದು ಕಷ್ಟಸಾಧ್ಯ. ನಾವು ನಾವಾಗಿ ಬದುಕಬೇಕು ಆದರೆ ಎಷ್ಟೋ ಸಲ ನಮ್ಮ ಬದುಕು ಬೇರೆಯವರ ಬರಹವೇ ಆಗಿರುತ್ತದೆ. 

ಥೆರಪಿಯಲ್ಲಿ ಪ್ರತಿ ಮಾತು ನನ್ನದಲ್ಲದ ಯಾರ  ಮಾತು ಎಂದು ಗೊತ್ತಾಗುತ್ತದೆ, ಯಾರೋ ಹೇಳಬಹುದು ನೀನು ಬದುಕಿನ ಹಿಂದಿನದನ್ನು ಹುಡುಕಹೊರಟಿದ್ದೀಯ ಅದಕ್ಕೆ ಎಲ್ಲವು ಅಸಮಂಜಸವಾಗಿದ್ದೆ ಕಾಣಿಸುತ್ತದೆ, ನಾವು ಮುಂದೆ ನೋಡಬೇಕು ಹಳೆಯದನ್ನು ಮರೆಯಬೇಕು ಎಂದು. ಆದರೆ ನಮ್ಮ ಬದುಕು ಏನೆಂದು ಮೊದಲ ೬-೭ ವರುಷದಲ್ಲಿಯೇ ನಿರ್ಧಾರವಾಗಿರುತ್ತದೆ. ಸ್ಕ್ರಿಪ್ಟ್ ತಯಾರಾಗುವುದು ಈ ಕಾಲದಲ್ಲಿಯೇ ಅಮೇಲಿನದೆಲ್ಲ ನಮ್ಮ ಅಭಿನಯ. ಆದರೆ ಒಂದಲ್ಲ ಒಂದು ರೀತಿಯಲ್ಲಿ ಒಂದಲ್ಲ ಒಂದು ವ್ಯಕ್ತಿ ಜೊತೆಯಲ್ಲಿ ಮೊದಲಾಗಿರುವುದೇ ನಂತರವೂ ಆಗುವುದು. ಎಷ್ಟೋ ಬಾರಿ ನಾವು ಹೇಳುತ್ತೇವೆ ಯಾಕೆ ನನಗೆ ಯಾವಾಗಲೂ ಹೀಗೆ ಆಗುತ್ತದೆ ಎಂದು. ಯಾಕೆಂದರೆ ಅದು ನಮ್ಮ ಬದುಕಿನ ನಿರ್ಧಾರದ ದಿನಗಳಲ್ಲಿ ನಾವು ಅರ್ಥೈಸಿಕೊಂಡ ಬದುಕಿನ ಕಥೆ ಆಗಿರುತ್ತದೆ. 

ಮನಸು, ಮನಸಿನ ಸಮಸ್ಯೆ ಮಾನಸಿಕತೆ ಎಲ್ಲರಿಗು ಇದೆ ಅದನ್ನು ನೋಡುವ ಮತ್ತು ಗುಣಪಡಿಸಿಕೊಳ್ಳುವ ಧೈರ್ಯ ಬೇಕು. ನಾನು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ.  ಖುಷಿಯನ್ನು ಖುಷಿಯಾಗಿ ನೋವನ್ನು ನೋವನ್ನಾಗಿ ನೋಡುವ ಈ ಹಾದಿ ಚಂದವಿದೆ. 

Thursday, 6 April 2023

ಬದುಕಿನ ಮತ್ತೊಂದು ಪುಟ ತೆರೆದುಕೊಳ್ಳುವ ಮುನ್ನ...

ಬೆಳಗಾದರೆ ೩೧ನೇ ವಸಂತಕ್ಕೆ ಕಾಲಿಡುತ್ತಿದ್ದೇನೆ. ದಿನವೂ ತೆರೆದುಕೊಳ್ಳುವ ಬರೆದ ಸಾಲುಗಳನ್ನೆ ಮತ್ತೆ ಮತ್ತೆ ಓದುತ್ತಾ ಇದು ಹೀಗಿರಲಿಲ್ಲ ಇದು ಹೀಗೇ ಆಯಿತಲ್ಲಾ ಎಂದುಕೊಳ್ಳುತ್ತಾ ಇರುವ ದಿನಗಳನ್ನು ಕಳೆಯುತ್ತಿರುವ ಇದೇ ಬದುಕಿನ ಮತ್ತೊಂದು ದಿನವಷ್ಟೆ ನಾಳೆಯೂ.. ಆದರೂ ಬರೆಯಬೇಕು.

ಈಗಾ ಅರ್ಥವಾಗಿದೆ ಬರೆಯಬೇಕು ಅಲ್ಲಿಂದಲೇ ಬದುಕಿಗೆ ಹೊಸ ಅರ್ಥಬರುವುದು. ಯೋಚನೆಗಳಿಗೆ, ಮಾತುಗಳಿಗೆ  ಜಾಗವೊಂದು ಬೇಕು ನಂಗೆ ಅದು "ಅಭಿಸಾರಿಕೆ". 

ಸಿಹಿ ನೆನಪುಗಳನ್ನು ಕೂಡಿಡಬೇಕಂತೆ ಆದರೆ, ಕೂಡಿಟ್ಟಿದ್ದು ಕೊಳೆಯುತ್ತದೆ. ಅಂದರೆ ಹರಿಬಿಡಬೇಕು, ಹರಿದಲೆಲ್ಲ ಹಸಿರು, ಹರಿದಷ್ಟು ಬದುಕು ತಿಳಿಯಾಗುತ್ತದೆ.

ಪ್ರೀತಿಗಿಂತ ಆಸ್ತಿಯಿಲ್ಲ, ಎಂಬುದು ಹೃದಯದ ಮಾತು. ಬದುಕಿನ ಕನಸುಗಳಿಗೆ, ಪ್ರೀತಿಗಿಂತ ದುಡ್ಡು ಬೇಕು ಎನ್ನುವುದು ಕಂಡುಕೊಂಡ ಸತ್ಯದ ಮಾತು.

ಆತ್ಮ ಶುದ್ಧಿಯೇ ಬದುಕಿನ ಗುರುತು ಎಂದ ಮನಸಿಗೆ ಬದುಕ ತತ್ವಗಳ ಹುಡುಕಾಟ.ಕನಸೆಂದರೆ ಹಠ ಗೆಲುವೆಂದರೆ ಬದುಕು ಎಂದು ಸಾಲು ಸಾಲು ಬರೆದ ಹುಚ್ಚಿಗೆ ಸೋಲುಗಳ ಕೈ ತುತ್ತು.

ಯಾರದೋ ಪ್ರೀತಿಯ ಮಾತುಗಳಿಗೆ ರೋಮಾಂಚನಗೊಂಡವಳಿಗೆ, ಪ್ರೀತಿಯ ಸವಿ ಹರಿಸಲು ಮಡಿಲಲ್ಲೊಂದು ನಗುವ ಹಸುಳೆ.

ಸುಮ್ಮನೆ ಬೇಸರವಾದಾಗಲೂ ಒಂದಷ್ಟು ದೂರ ನಡೆಯುತ್ತಿದ್ದವಳಿಗೆ ಸುಖಾಸುಮ್ಮನೆ ಕುಳಿತರೂ ಮೈಮನಕ್ಕೆಲ್ಲಾ ನೋವು.

೩೦ ಮುಗಿಯುತ್ತಿದ್ದಂತೆ ಬದುಕು ಎಷ್ಟೆಲ್ಲಾ ಬದಲಾಯಿತು ಏನೆಲ್ಲವನ್ನು ಕಲಿಸಿತು. ಮತ್ತೊಂದು ಪುಟಕ್ಕೆ ತೆರೆದುಕೊಳ್ಳುವ ಮುನ್ನ ನನ್ನೊಳಗೆ, ಒಂದಷ್ಟು ಆತ್ಮ ವಿಮರ್ಶೆಯಾಗಬೇಕು, ನನ್ನ ಜೊತೆ ನಾನು ಕೂತು ಮಾತನಾಡಬೇಕು, ನನ್ನ ಮಡಿಲಲ್ಲಿ ಮಲಗಿ ಒಂದಷ್ಟು ಸಾಂತ್ವನದ ಸವಿ‌ಸವಿಯಬೇಕು.  

೩೦ ವರುಷಗಳಿಂದಲೂ ನನ್ನೊಡನೆ ಬಂದ ಒಳಗಿನ ಮಗುವನ್ನು, ಹರೆಯದ ಕೂಸನ್ನು, ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಲು ಹೊರಟ ಹುಚ್ಚು ಹುಡುಗಿಯನ್ನ, ಒಲವ ಹೊಳೆಯಲ್ಲಿ ತಂಪಾದ ತಾಯಿಯನ್ನ ಒಮ್ಮೆ ನೊಡಿಕೊಳ್ಳಬೇಕು.

ನಗುವಿನ‌ ಹುಡುಕಾಟದ 
ಅದೇ ಅಭಿಸಾರಿಕೆ


Sunday, 30 October 2022

ಮಗಳಿಗೆ...

ಮಗಳೆಂಬೊ ಮುದ್ದು ಗುಬ್ಬಿಗೆ..

ಶ್ರಾವಣದ ಕೊನೆಯ ಮಂಗಳವಾರ ಪುಟ್ಟ ದೇವತೆ ಒಬ್ಬಳು ಜನಿಸಿದಳು. ನನ್ನ ಬದುಕಿನ‌‌‌ ಅತೀ ಯಾತನೆಯ ಕ್ಷಣವೊಂದು ನಗುವಾಗಿ ಪರಿವರ್ತನೆಯಾಯಿತು. ಅಸಾಧ್ಯವಾದ ಗೆಲುವೊಂದು ದಕ್ಕಿದ ದಿನ‌‌ ಅದು. 

ಕಂದಾ...
ನೀನು ನನ್ನ ಜೀವನ‌ ಪ್ರೀತಿ, ಬದುಕುವ ಕಾರಣ. ನನ್ನ ಗೆಲ್ಲಿಸಿದಾಕೆ‌. ದಿನಗಳು ಕ್ಷಣಗಳಾಗಿ ಕಳೆಯುತ್ತಿವೆ. ನಿನ್ನ ಹೊರತಾಗಿ ಬದುಕಿಗೆ ಮತ್ತೇನು ಬೇಕಿಲ್ಲ ಎನಿಸುತ್ತಿದೆ. ಯಾವ ಸೋಲು‌ ಯಾವ‌‌ ಗೆಲುವು ದೊಡ್ಡದಲ್ಲ, ನಿನ್ನ ಅಳುವು ಮನಸ್ಸನ್ನು ತೀವ್ರವಾಗಿ ಸಂತೈಸುವ ಯಾವುದೋ‌ ಸಂಗೀತದಂತೆ. 
ಈಗೀಗಾ‌ ನೀನು ನಗುತ್ತಿಯಲ್ಲ‌ ಅದರಲ್ಲಿ ನನ್ನ ಉಸಿರೆ ಇದೆ ಎನಿಸುತ್ತಿದೆ. ನಿನಗಾಗಿ  ನನ್ನ ಉಸಿರ ಬಿಗಿ ಹಿಡಿದು ಬದುಕಿಬಿಡುವೆ ಬದುಕಿನೆಲ್ಲ ಏರಿಳಿತಗಳ ಹೊರತಾಗಿಯೂ...

ನಿನ್ನ ಬದುಕಿಗೆ ನೆರಳಾಗಿ ನಿನ್ನ ಕನಸಿಗೆ ಜೊತೆಯಾಗಿ, ನನ್ನ ಬದುಕ ಕೊನೆಯ ತನಕ ನಿನ್ನನ್ನು ಪ್ರೀತಿಸುತ್ತಲೇ ಇರುತ್ತೇನೆ. 

ನಿನ್ನ ಹೆಸರು ಸೀತೆಯ ಇನ್ನೊಂದು ಹೆಸರು ನೀನು ಅವಳಂತೆ ಎಂತಹ ಕಷ್ಟದಲ್ಲೂ ನೀನು ನೀನಾಗಿಯೆ ಇರಬೇಕು. 

ತುಂಬಾ ಪ್ರೀತಿ ‌ಮುದ್ದು ಮೈಥಿಲಿ...

Thursday, 5 May 2022

ಜೀವ ನಿನ್ನಾಸರೆಗೆ ಕಾಯುತಿಹುದು...

ನನ್ನೊಳಗಿನ ಪುಟ್ಟ ಹೃದಯವೇ... 

ನನ್ನ ಬದುಕಿನ ದೊಡ್ಡ ಕನಸು ನೀನು, ನನ್ನೊಳಗೆ ನಿನ್ನ ಹೃದಯ, ನಿನ್ನ ಉಸಿರಾಟ, ನಿನ್ನ ಪುಟ್ಟ ಪಾದಗಳ ಸ್ಪರ್ಶ ಸುಖ. ನೀನು ನನ್ನ ಪುಟ್ಟ ಕಂದ. 

ಇನ್ನೊಂದು ಸ್ವಲ್ಪ ದಿನವಾದರೆ ನಿನ್ನ ಅಳು ನಗುವಿನ ಮೆರವಣಿಗೆ ನನ್ನ ಬದುಕಿನ ಹಬ್ಬದ ದಿನಗಳು ಪ್ರಾರಂಭ.  

ಇಷ್ಟು ದಿನ ಬದುಕಿದ ಬದುಕಿಗೆ ಖುಷಿ, ಸಾರ್ಥಕತೆ ಎಂದರೆ  ಅದು ನೀನು ಬರುತ್ತೀಯ ಎಂದಾದ ಮೇಲಿನ ಈ ದಿನಗಳು.  ಬದುಕ ಗೆಲುವಿನ ಹಠಕ್ಕೆ ಬಿದ್ದ ತೀರಾ ಭಾವುಕ ಮನಕ್ಕೀಗ, ಬದುಕುವ ನಿಜ ಕಾರಣ ಸಿಕ್ಕದ ಖುಷಿ. ಈ ಕಾರಣಕ್ಕಿಂತ, ಇನ್ಯಾವ ಕಾರಣವೂ ಬೇಕಿಲ್ಲ ಬದುಕಲು ನಂಗೆ. 

ಏನೆಂದು ಬರೆದಿಡಲಿ ಇಲ್ಲಿ? ಆದರೆ ಬರೆಯಲೇ ಬೇಕು ನನ್ನ ಬದುಕಿನ ಎಲ್ಲ ದ್ವಂದ್ವಗಳಿಗೆ, ಕನಸುಗಳಿಗೆ, ಕಿವಿಯಾದ ಈ ಅಭಿಸಾರಿಕೆಯ ಮಡಿಲಲ್ಲಿ ನಿನ್ನ ಬಗ್ಗೆ ಹೇಳದಿದ್ದರೆ ತಪ್ಪಾದೀತು. 

ನಿನ್ನ ಹೃದಯ ಬಡಿತ ಕೇಳಿದ ದಿನಗಳಿಂದ ನಿನ್ನ ಪುಟ್ಟ ಪಾದ ಸ್ಪರ್ಶವಾಗುತ್ತಿರುವ ಈ ಘಳಿಗೆಗಳು ನನ್ನ ಬದುಕಿನ ಅಮೂಲ್ಯ ಕ್ಷಣಗಳು. ಅಕ್ಷರಸಹ ಜೀವಿಸುತ್ತಿದ್ದೇನೆ ಈ ದಿನಗಳನ್ನು. 


ನಿನ್ನ ಬೆಳವಣಿಗೆಯಲ್ಲಿ ನಿನ್ನ ಕಲಿಕೆಯಲ್ಲಿ ನಾನು ಬದುಕುವ ಕಲಿಯುವ ಬಯಕೆ ಮನದ ತುಂಬಾ. ಆರೋಗ್ಯವಾಗಿರು ನನ್ನೊಳಗಿರುವ ಆ ಹೃದಯಲ್ಲಿ ನನ್ನ ಜೀವವೇ ಇದೆ. 

ಕಾಯುತ್ತಿರುವೆ ನಿನಗಾಗಿ....

Sunday, 13 June 2021

'ಅಭಿಸಾರಿಕೆ'ಯ ಹುಟ್ಟುಹಬ್ಬ..

ನಾನು‌ ಎಂಬುದು ನನ್ನ ಸದಾಕಾಲಕ್ಕೂ ಬದುಕಿಸುವ ಜೀವ ಗಂಗೆ.. ಬದುಕಿನ‌ ಎಲ್ಲದರಾಚೆಗೆ ನಂಗೆ ಕಾಡುವುದು ಮಡಿಲಾಗುವುದು ನೀ ಮಾತ್ರ. ನನ್ನ ಅಭಿಸಾರಿಕೆ ನನ್ನ ಭಾವದ ಬಯಲು. 

ತುಂಬಾ ಬರೆಯಬೇಕು ಎಂತಲೇ ನೀನೆಂಬ ಕನಸಿಗೆ ಹೆಸರು ಕೊಟ್ಟಿದ್ದು. ಬರೆದದ್ದು ತುಂಬಾ ಕಡಿಮೆ. ಆದರೆ ಬರೆದಷ್ಟೂ ನಿನ್ನ ಮಡಿಲಲ್ಲಿ ಬಂದು ಹೇಳಿಕೊಂಡಂತಹ ನನ್ನ ಬದುಕಿನ ಶುಧ್ಧ ಭಾವಗಳೇ...

ನಿಂಗೆ ಗೊತ್ತಾ, ತುಂಬಾ‌ ನೋವಿರುವ ಜಾಗದಿಂದಾಗಲಿ ಇಲ್ಲ ತುಂಬಾ ಖುಷಿಯಿರುವ ಜಾಗದಿಂದಾಗಲಿ ಅಷ್ಟು ‌ಸುಲಭಕ್ಕೆ‌‌ ಎದ್ದು ಬರಬಾರದು. ಭಾವವೊಂದು ಮನದಲ್ಲಿ ಹೊಕ್ಕು ತೀವ್ರವಾಗಿ ಕಾಡಲೇಬೇಕು, ಅಷ್ಟು ಕಾಲ ಕೊಡದಿದ್ದರೆನೇ, ಮನಸ್ಸು ಪಾಪಪ್ರಜ್ಞೆಗೆ
ಬೀಳುವುದು. 

ಪ್ರತಿ ದಿನವೂ ಬೆಳಕು ಮೂಡುತ್ತದೆ ಆದರೆ, ಕತ್ತಲೆಯೂ ಬೆಳಕ ಬೆನ್ನಲ್ಲೇ ಅಂಟಿರುತ್ತದೆ ಎನ್ನುವುದ ಮರೆಯಬೇಡ. ಯಾರು ಹೇಳಿದ್ದು ಮನುಷ್ಯನ ಸಾವು ಒಂದೇ ಸಲ ಎಂದು ಭಾವ ಸತ್ತಾಗಲೆಲ್ಲ ಮನುಷ್ಯ ಸಾಯುತ್ತಾನೆ ಆದರೆ ಸತ್ತು ಮತ್ತೆ ಹೊಸದಾಗಿ ಹುಟ್ಟುತ್ತಾನೆ.  ನೋವಿರದ ದೇಹದ ಸಾವಿಗಿಂತ ಭಾವಗಳ ಸಾವು ಹೆಚ್ಚು ನೋವಲ್ಲವಾ? 
ನೋವು,ನಲಿವು ಪಾಪಪ್ರಜ್ಞೆ,ಭಯ, ನನ್ನೊಳಗಿನ ತರ್ಕ ಎಲ್ಲವೂ ಇಲ್ಲಿವೆ. ತುಂಬಾ ಬರೆಯಲಿಲ್ಲವೆಂದರೆ ಮನಸ್ಸು ಸ್ಥಿತ ಪ್ರಜ್ಞವಾಗಿದೆ ಎಂದಲ್ಲ. ಯಾಕೊ ನಿನ್ನೊಡಲಲ್ಲಿ ಹೇಳಿಕೊಳ್ಳಲು ಪದಗಳು ಇರಲೇ ಇಲ್ಲ. ಮೌನ ಮಾತಿಗಿಂತ ಖುಷಿಕೊಡುವ ಕಾಲಘಟ್ಟಕ್ಕೆ ಬಂದು ನಿಂತಿದ್ದೇನೆ ಎಂದರ್ಥವಾ? ಗೊತ್ತಿಲ್ಲ.

ನಿಜವೆಂದರೆ ನನ್ನೊಳಗಿನ ಗದ್ದಲವನ್ನು ಇಲ್ಲಿ ನಿನ್ನೊಡಲಿಗೆ ಇಳಿಸಿಬಿಟ್ಟರೆ ದೀರ್ಘ ಉಸಿರೊಂದನ್ನು ಬಿಟ್ಟಂತಹ ಸಮಾಧಾನ ನಂಗೆ.
ಅಭಿಸಾರಿಕೆ ಕೇವಲ ನನ್ನ ಭಾವ ಟಿಪ್ಪಣಿಯಾಗಲಿಲ್ಲ ನನ್ನ ನೋವಿಗೆ ಮಡಿಲಾಗಿ ಖುಷಿಗೆ ಪ್ರತಿಬಿಂಬವಾಗಿ ಬದುಕ ನೆನಪಿನ ಹೆಜ್ಜೆ ಗುರುತಾಗಿ ನನ್ನೊಂದಿಗಿದೆ.

 ನೀನೆಂದರೆ ತುಂಬಾ ಪ್ರೀತಿ ನಂಗೆ.
ಹುಟ್ಟಿದ ಹಬ್ಬದ ಶುಭಾಶಯಗಳು ಕಣೇ... ನಮ್ಮಿಬ್ಬ ಬೆಸುಗೆ ಗಾಢವಾಗಲಿ...ನಮ್ಮ ಹೂ ನಗೆಯ ಹುಡುಕಾಟ ನಿರಂತರವಿರಲಿ.

Friday, 15 May 2020

ನಿನ್ನ ನಾಳೆಗಳಿಗೆ....

ಅದ್ವಿತ್ ಕಂದಾ.......  




ನೀ ಹುಟ್ಟಿ ಇಂದಿಗೆ ಒಂದು ವರುಷ ಒಂಭತ್ತು ತಿಂಗಳು  ಕಳೆದು ಹೋದವು. ಆದರೆ ಇಂದಿನ ಪರಿಸ್ಥಿತಿ ಇದೆಯಲ್ಲ ನಾನುಬರೆಯಲೇಬೇಕು. 

ನಿಂಗೆ ಇದೆಲ್ಲ ಇಂದು  ಅರ್ಥವಾಗದು. ಗೊತ್ತು ನಂಗೆ, ಆದರೆ ನಿನ್ನ ಸುತ್ತಲಿರುವ ನಮ್ಮಗಳ ಇಂದಿನ ಬದುಕು ಇದುವೇ. 

ಇವತ್ತಿಗೆ ನಾವೆಲ್ಲ ಮನೆಯಲ್ಲೇ ಬಂಧಿತರಾಗಿ ಸರಿ ಸುಮಾರು ೬೦ ದಿನಗಳಾದವು. ಹಕ್ಕಿಗಳಂತೆ ಹಾರಡಿಕೊಂಡು ಯಾವ ಮಿತಿಗಳಿಲ್ಲದೆ ಬದುಕುತ್ತಿದ್ದ ನಮ್ಮಗಳಿಗೆ ನಿಜಕ್ಕೂ ಈ ಬಂಧನ ಒಂಥರಾ ಕಷ್ಟವೇ ಸರಿ. 

ಈ ವರುಷ, ಪ್ರಾರಂಭದಿಂದಲೂ ಒಂದಷ್ಟು ಭಯ, ನೋವು-ನಿರಾಸೆಯನ್ನೇ, ಹೊತ್ತು ಬಂದಿದೆ. ಈ ಸಂವತ್ಸರಕ್ಕೆ ಹೆಸರು ಶಾರ್ವರಿ ಅಂತ. ಅಂದರೆ ಕತ್ತಲೆ ಎಂದರ್ಥವಂತೆ. ಹೆಸರು ಚಂದವೇ, ಆದರೆ ಈ ಯುಗಾದಿಯ ಆಚೀಚೆಯ ಕ್ಷಣಗಳಿವೆಯಲ್ಲ, ಅದು ಭಯಂಕರ. ವಿಕಾರಿ ಸಂವತ್ಸರ ಕಳೆದು ಶಾರ್ವರಿ ಬಂದಿದೆ. ವಿಕಾರಿಯ ಹೋಗುವ  ದಿನಗಳು ಹುಟ್ಟಿಸಿದ್ದು ಸಾವಿನ ಭಯಗಳನ್ನ. 

ನಿನ್ನ ಮುದ್ದು ಭಾಷೆಯಲ್ಲಿ ಹೇಳುವುದಾದರೆ ಇದೊಂದು ಕಣ್ಣಿಗೆ ಕಾಣದ ಗುಮ್ಮಾ. ಅದರ ಹೆಸರು ಕೊರೊನ, ಭಯ ಭೀಕರವಾದದ್ದು. ಇದು ಚೀನಾ ದೇಶದಿಂದ ಬಂದ ಸಾವಿನ ಬುತ್ತಿ. ಕಣ್ಣಿಗೆ ಕಾಣದ, ಆದರೆ ಅದೆಷ್ಟೋ ಜೀವವನ್ನೇ ತಿನ್ನುತ್ತಿರುವ ಸಧ್ಯದ ನರಭಕ್ಷಕ. ಚಿಕಿತ್ಸೆ ಇಲ್ಲದ, ಇದಕ್ಕೆ ನಾವುಗಳು ಹೆದರಿ ಕುಳಿತಿದ್ದೇವೆ. 

ದಿನ ನಿತ್ಯ ನಿಲ್ಲಲೂ, ಜಾಗವಿಲ್ಲದಂತೆ ಇರುವೆಗಳಂತೆಯೇ ಗಿಜಿಗುಡುತ್ತ ಇದ್ದ ಈ ಮಹಾನಗರಿ ಇಂದು ಅಕ್ಷರಶಃ ಖಾಲಿಯಾಗಿದೆ. ಹೊಗೆ, ಗಾಳಿ, ವಾಹನಗಳ ಶಬ್ದಕ್ಕೆ ನಿರ್ಜೀವವಾಗಿದೆ. ಒಂಥರಾ ಭೂಮಿ ನಿಲ್ಲುವುದನ್ನೇ ಮರೆತಂತೆ ಭಾಸವಾಗುತ್ತಿದೆ.  ಈ ನಗರಿ ಇಂದು ಕಂಡಕಂಡಲ್ಲಿ ಹೂ ಬಿಟ್ಟು ಚಂದಗೆ ನಿಂತಿದೆ, ಆದರೆ ಈ ಸೌಂದರ್ಯವ ಸವಿಯುವವರು ಯಾರು. ಸಾವಿನ ಭಯ ಯಾವ ಸುಖವನ್ನು ಆಸ್ವಾದಿಸಲು ಬಿಡುವುದಿಲ್ಲ ಅಲ್ಲವಾ?

ಮೌನ ಮತ್ತು ಖಾಲಿತನವಿದೆಯಲ್ಲ, ಅದು ನಮ್ಮನ್ನು ತೀರಾ ಆಂತರಿಕವಾಗಿ ಸುಟ್ಟು  ಬಿಡುತ್ತದೆ.  ಅರ್ಥವಾಗಿದ್ದು ಏನು ಗೊತ್ತ?ಮನುಷ್ಯ ಬದುಕುವ ಖಾಯಿಲೆಗೆ ಬಿದ್ದು ತನ್ನ ತನವನ್ನೇ ಮರೆತುಬಿಟ್ಟಿದ್ದ. ಆದರೆ ಈ ಕ್ಷಣವಿದೆಯಲ್ಲ, ನಾವು ಯಾರು? ನಮ್ಮ ಮೂಲ ಬಯಕೆ ಏನು? ಎಂದು ಜ್ಞಾಪಿಸುತ್ತಿದೆ. ದುಡ್ಡು,ಕೆಲಸ ಅಂತೆಲ್ಲ ಯಾವುದರ ಹಿಂದೆ ಎಂದೇ ಗೊತ್ತಿಲ್ಲದೆ ಓಡುತ್ತಲೇ ಇದ್ದೇವೋ,  ಒಂದೇ ಸಮನೆ ನಿಂತಲ್ಲೇ ನಿಂತು ಬಿಟ್ಟಂತಾಗಿದೆ. ಆದರೆ ವಿಚಿತ್ರವೆಂದರೆ ಈ ಜ್ಞಾನೋದಯಕ್ಕೆ ಕಾರಣ ಜೀವ ಭಯ. ನಗರ ನಮ್ಮನ್ನು ಸೆಳೆಯುವುದೇ ಈ ಜೀವಂತಿಕೆಯ ಮುಖವಾಡದಿಂದ. ಆದರೆ ಇಂದು ಮುಖವಾಡಗಳಿಲ್ಲದೇ ತಲೆ ತಗ್ಗಿಸಿ ನಿಂತಿದೆ. 

ಮನುಷ್ಯನ ಬದುಕಿಗೆ ನೆಮ್ಮದಿ,ಪ್ರೀತಿ, ಸಹಬಾಳ್ವೆಯೇ ಮುಖ್ಯ. ದ್ವೇಷದಿಂದ,  ಅಸೂಯೆಯಿಂದ ಕಲಿಸಲಾಗದನ್ನು, ಈ ಕಾಲವೇ ಕಲಿಸಿದೆ. ಆದರೆ ನಾವುಗಳು ಎಷ್ಟು ಕಲಿಯುತ್ತೇವೆ? ಯಾರಿಗೆ ಗೊತ್ತು!!!

ಒಂದು ಕಡೆ ಸೋಂಕಿನ ಸಂಖ್ಯೆ ಏರುತ್ತಲೇ ಇದೆ. ಇನ್ನೊಂದು ಕಡೆ ಸಾವಿನ ಸಂಖ್ಯೆಯೂ... ಆದರೆ ಮತ್ತೊಂದು ಕಡೆ ಜನ ಸಾವನ್ನು ಗೆದ್ದ ಮೃತ್ಯುಂಜಯರಂತೆ ಓಡಾಡಿಯುತ್ತ, ಮೈ ಮರೆಯುತ್ತಿದ್ದಾರೆ. ಸರ್ಕಾರ ಯೋಜನೆಯ ಹೆಸರಲ್ಲಿ, ಕಾನೂನಿನ ಹೆಸರಲ್ಲಿ,  ನಮ್ಮ ರಕ್ಷಣೆಗೆ ನಿಂತರೆ ನಾವಿಲ್ಲಿ ಜೀವದ ಹಂಗು ಇಲ್ಲದೆ ತಿರುಗುತ್ತಿದ್ದೇವೆ. 

ಕಂದಾ.. 

ಇದನಂತೂ ಹೇಳಲೇಬೇಕು. ಪೊಲೀಸರು, ಡಾಕ್ಟರ್, ಸ್ವಚ್ಛಮಾಡುವವರು, ಇಂದಿನ ನಿಜವಾದ ದೇವರು. ನಮ್ಮಗಳ ಬದುಕಿಗಾಗಿ, ನಮ್ಮ ನಾಳೆಗಳಿಗಾಗಿ ಅವರು ಸಲ್ಲಿಸುತ್ತಿರುವ ಸೇವೆಯನ್ನ ನಾವು ನೆನೆಯಲೇಬೇಕು. 

ನಾವಿಲ್ಲಿ ಮನೆಯಲ್ಲೇ ಬಂಧಿತರಾಗಿದ್ದೇವೆ. ನಿಂಗೆ ಬೇಸರ ನಾಲ್ಕು ಗೋಡೆಯ ಮಧ್ಯೆ ಇದ್ದು ನಮಗೂ ಬೇಸರವೇ. ಹೇಳಿಕೊಳ್ಳಲು ಬಾರದ ನೀನು, ಮತ್ತೆ ಹೇಳುತ್ತಲೇ ಒಪ್ಪಿಕೊಂಡು ಬದುಕಬೇಕಾದ ನಾವುಗಳು. 

ಸತ್ತೇ ಹೋಗಿಬಿಡುತ್ತೇವೆ ಅಂತಲ್ಲ... ಆದರೆ ನಮ್ಮ ನಾವು ಕಾಯ್ದುಕೊಳ್ಳದಿದ್ದರೆ ಇಲ್ಲೇ ಎಲ್ಲೋ ಸುಳಿದಾಡುತ್ತಿರುವ ಸಾವು ಬಂದು ತಬ್ಬಿಯೇ ಬಿಡುತ್ತದೆ. 

ಯುದ್ಧದ ದಿನಗಳ ಕಾಣದ ನಾವು ಇದೊಂದು ಹೊಸ ದಿಗ್ಬಂಧನಕ್ಕೆ ಸಿಕ್ಕಿಕೊಂಡಿದ್ದೇವೆ.  

ನೀನು ದೊಡ್ಡವನಾದ ಮೇಲೆ ಇದನೆಲ್ಲ ಓದಲಿ ಮತ್ತು ನಿನ್ನ ತಲೆಮಾರಿಗೆ ಇದು ಇತಿಹಾಸದಲ್ಲಿ ಮಾತ್ರ ಇರಲಿ, ಎಂಬ ಆಶಯ ಅಷ್ಟೆ.  ಈ ಜೀವಭಯ ನಮ್ಮಗಳಿಗೇ ಮುಗಿದು ಹೋಗಲಿ ಮತ್ತು ಇಂದಿನ ನಮ್ಮ ಬದುಕಿನ ಪಾಠಗಳು ನಿನಗೆ ಕಲಿಕೆಯಾಗಲಿ ಅಂತಷ್ಟೇ.