Thursday 24 July 2014

ಏನೆಲ್ಲಾ ಆದಳಾಕೆ ಅದಕ್ಕೇ ಹೆಣ್ಣಾಕೆ.....



ಸೃಷ್ಟಿಯೇ  ಯಾಕೆ ಮೋಸ ಮಾಡಿತೋ  ಕಾಣೆ... ಗಂಡಿಗೆ ಸಂಪೂರ್ಣ ದೈಹಿಕ ಶಕ್ತಿಯನ್ನು ಕೊಟ್ಟು ಹೆಣ್ಣಿಗೆ ಅದಕ್ಕೂ, ನಾಲ್ಕು ಪಟ್ಟು ಹೆಚ್ಚು ತಾಳ್ಮೆ, ಕ್ಷಮೆ ಮತ್ತು ಮಾನಸಿಕ ಸ್ತೈರ್ಯವನ್ನು ಕೊಟ್ಟತೋ.. ಅದ್ಯಾಕೋ ಕಾಣೆ ಅವಳಿಗೂ, ಮುದವಾಗುವಂತ ವಿಶಿಷ್ಟವಾದ  ದೈಹಿಕ ಮತ್ತು ಅಂತರಿಕ ಚೆಲುವನ್ನು ಕೊಟ್ಟದ್ದೂ  ಪ್ರಕೃತಿಯೇ...  

ಸಣ್ಣ ಕಂದ ಆಗತಾನೇ ಕಣ್ಬಿಟ್ಟಿರುತ್ತದೆ.  ಚಂದ ಕಾಣುವ ಪ್ರಪಂಚವನ್ನು ನೋಡ ಹೊರಟಿರುತ್ತದೆ.  ಅದ್ಯಾರೋ ಮುತ್ತು ಕೊಡುತ್ತಾರೆ ಅಸಹ್ಯವಾಗುತ್ತದೆ ಕೇಳಿದರೆ ಅಮ್ಮ,  ನೀನು ಪಾಪು ಅಲ್ವಾ ಅದಕ್ಕೆ ಅನ್ನುತ್ತಾಳೆ.  ಒಳಗಿನ ಮಗಳು ಜಾಗ್ರತಳಾಗುತ್ತಾಳೆ  ಕ್ಷಮಿಸಿಬಿಡುತ್ತಾಳೆ.  ಕಾರಣ ತನ್ನ ಪ್ರಯತ್ನವಿಲ್ಲದೆಯೇ ತಾನೇ ತಾನಗಿ ಅರಳುತ್ತಿರುವ ಹೂವಂತ ಚಂದದ ಮಗುವಾಕೆ.. 

 ತನ್ನದೇ ರಕ್ತ ಸಂಭಂದಿಯೊಬ್ಬ ಆಗತಾನೇ ಬದಲಾವಣೆಯಾದ ದೇಹವನೆಲ್ಲೋ ಮುಟ್ಟುತ್ತಾನೆ, ತಡಕಾಡುತ್ತಾನೆ.  ಮತ್ತದೇ ಅಸಹ್ಯ ಭಾವ ಆದರೆ ಏನು ಮಾಡಿಯಾಳು  ಕ್ಷಮಿಸಿಬಿಡುತ್ತಾಳೆ ಕಾರಣ ತಂಗಿಯಾಕೆ ... 

ತನ್ನದೇ ಲೋಕದಲ್ಲಿ ಒಳಗೊಳಗೆ ನಗುತ್ತ ಬೆಳಿಗ್ಗೆ ಖುಷಿಯಿಂದ  ಕಾಲೇಜಿಗೆ ಹೋಗುತ್ತಿರುತ್ತಾಳೆ, ದಾರಿಹೋಕನೊಬ್ಬ ಸುಮ್ಮನೆ ದಾಟಿ ಹೋಗುವಾಗ ಅದೆಲ್ಲೋ ಮುಟ್ಟಿ  ಹೋಗುತ್ತಾನೆ.  ಏನು ಮಾಡಲು ಸಾಧ್ಯ ಉಹೂ,  ಕ್ಷಮಿಸಿಬಿಡುತ್ತಾಳೆ.  ಕಾರಣ ಅಸಹಾಯಕ ಹುಡುಗಿಯಾಕೆ.... 

ಕಾಲ ಕಳೆಯುತ್ತಲೇ ಇರುತ್ತದೆ.  ಅದೊಂದು ದಿನ ರಾತ್ರಿಯ ನಿದ್ದೆಯಲ್ಲಿ ಅದ್ಯಾರೋ ತಬ್ಬಿದಂತ ಕೆಟ್ಟ ಕನಸು. ಮರುದಿನ ಯೋಚಿಸುತ್ತಾಳೆ,  ಹಾಗಾಗಲಿಕ್ಕಿಲ್ಲ ಅವನು ಅಪ್ಪನ ವಯಸ್ಸಿನವನು ಹುಚ್ಚು ಕನಸು ಎಂದು ನಗುತ್ತಾಳೆ. ಅದೇ ಹುಚ್ಚು ಕನಸು ಎರಡೇ ದಿನಕ್ಕೆ ನಿಜವಾದಾಗಲೂ ಆಕೆ ಕಿರುಚಲಾರಳು.  ಆ ಕ್ಷಣವೂ ಅದು ಕನಸೋ ನನಸೋ ತಿಳಿಯುವುದಿಲ್ಲ.  ತಿಳಿದ ಮೇಲೂ  ಕ್ಷಮಿಸಿಬಿಡುತ್ತಾಳೆ,  ಕಾರಣ ಮಗಳಾಕೆ ... 

ಅವಳ ಪ್ರೀತಿಯ ಗುರುಗಳು ಎಷ್ಟೋ ವರುಷಗಳಿಂದ ಕಲಿಯಲಾಗದ ಹಲವು ಸಮಸ್ಯೆಗಳಿಗೆ ಪರಿಹಾರ ಕಳಿಸಿಕೊಟ್ಟವನಾತ ಅದೊಂದು ದಿನ ಅಸಭ್ಯವಾಗಿ ವರ್ತಿಸ ಬಯಸುತ್ತಾನೆ.  ಗೊತ್ತು, ಅವನದು ತಪ್ಪು ಎಂದು.  ಆದರೆ ಆಕೆ ಏನು ಮಾಡಲಾರಳು ಅವನನ್ನೂ ಕ್ಷಮಿಸಿಬಿಡುತ್ತಾಳೆ, ಕಾರಣ ವಿದ್ಯೆಯ ಋಣದಲ್ಲಿರುವ ವಿದ್ಯಾರ್ಥಿನಿ ಆಕೆ... 

ಅವನು ಒಳ್ಳೆಯ ಗೆಳೆಯ, ಕಷ್ಟಕ್ಕೆ ಸ್ಪಂದಿಸುವವ, ನಂಬಿಕೆ ಬೆಳೆಸಿಕೊಂಡವ ಅದ್ಯಾವುದೋ ಕ್ಷಣಕ್ಕೆ ಗೆಳತಿ ಎಂಬುದನ್ನೂ ಮರೆತು ಬರಿಯ ಹೆಣ್ಣಿನ ದೇಹವಾಗಿ ನೋಡುತ್ತಾನೆ- ಹೀರ ಬಯಸುತ್ತಾನೆ.  ಇಲ್ಲ ಅವಳು ಶಿಕ್ಷಿಸುವುದಿಲ್ಲ ಕ್ಷಮಿಸಿಬಿಡುತ್ತಾಳೆ, ಕಾರಣ ಗೆಳತಿ ಆಕೆ.... 

ಎಂತಹದೇ ಅಸಾಧ್ಯ ನೋವಾದಾಗಲೂ  ಮೌನದಿಂದ ಎಲ್ಲಾ ನೋವನ್ನು ನುಂಗುತ್ತಾಳೆ, ಎಲ್ಲರನ್ನೂ ಕ್ಷಮಿಸಿಬಿಡುತ್ತಾಳೆ.  ಕಾರಣ ನೋವ ನುಂಗುವಲ್ಲಿನ ಕಾಠಿಣ್ಯವನ್ನು, ನೋವ ವಿರೋಧಿಸುವಲ್ಲಿ ತೋರಲಾರಳಾದ ಮಮತೆಯ, ಮೃದು ಮನಸ್ಸಿನ, ಶ್ರೇಷ್ಠ ತಾಯಿ ಆಕೆ. 


ಪ್ರತಿ ನೋವಿನ ಹಿಂದೆ ಪ್ರತಿ ಹೆಣ್ಣಿನಲ್ಲೊಬ್ಬ ತಾಯಿ, ತಂಗಿ, ಗೆಳತಿ, ವಿದ್ಯಾರ್ಥಿನಿ, ಮಗಳು ಎಲ್ಲರೂ  ಜಾಗ್ರತರಾಗುತ್ತಾರೆ. 

ಅದಕ್ಕೇ,    

ಎಷ್ಟು ಸಲವಾದರೂ ಆಕೆ ಕ್ಷಮಿಸುತ್ತಾಳೆ ಕಾರಣ ಕ್ಷಮೆಯಾಧರಿತ್ರಿ ಆಕೆ... 

ನಂಬಿಕೆಯೇ ಸತ್ತು ಹೋಗುವ ಪರಿಸ್ಥಿತಿಯಲ್ಲೂ ಮತ್ತೆ ನಂಬುತ್ತಾಳೆ ಕಾರಣ ನಂಬಿಕೆಯನ್ನೇ ಉಸಿರಾಗಿಸಿಕೊಂಡು ಹುಟ್ಟಿದವಳಾಕೆ ... 

ಎಷ್ಟೇ ಹರಿತವಾದ ಚಾಣದಿಂದ ಕೆತ್ತಿದರೂ  ಕಣ್ಣಿಗೆ ಸಿಡಿಯಲಾರಳಾಕೆ-  ಅದಕ್ಕೆ ಚಂದದ  ಪ್ರತಿಮೆ ಆಕೆ ಮತ್ತು ಚಂದಕ್ಕೇ ಉಪಮೆ ಆಕೆ ...  
ಎಲ್ಲವನ್ನೂ ಕ್ಷಮಿಸುವವಳಾಕೆ... ಮತ್ತೆ ಮತ್ತೆ ನಂಬುವವಳಾಕೆ...ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸುವವಳಾಕೆ...   

ಕಾರಣ, ಗಂಡಿಗಿಂತ ಅದಮ್ಯ ಮನೋಸ್ತೈರ್ಯವಿರುವ, ತಾಳ್ಮೆಯ ಜೀವಂತಿಕೆಯಾದ  ಹೆಣ್ಣಾಕೆ......  





ಚಿತ್ರ : ನನ್ನ ಕಲ್ಪನೆಯಿಂದ  ನಾನೇ ಬಿಡಿಸಿದ್ದು.   

Friday 18 July 2014

ಧರ್ಮ ಜ್ಯೋತಿ ಬೆಳಗಿದವನ ಎದುರು ಕುಳಿತು...





ಶಿವನೇ  ಮಗುವಾಗಿ
ಬಾಲ ಸೂರ್ಯನನ್ನೇ ಕಣ್ಣಾಗಿಸಿ
ದಾರಿಯನ್ನು ಹುಡುಕುತ್ತ ಭಾರತಾಂಬೆಯ ಮಡಿಲಿಗೆ ಬಂದನಂತೆ...

ಭಾರತಿಯೇ ತಾಯಿಯಾಗಿ
ದೇಶಪ್ರೇಮವನ್ನೇ ಜೀವವಾಗಿಸಿ
ಧರ್ಮ ಜ್ಯೋತಿಯ ಪ್ರಭೆಯಾಗಿ ಬೆಳಗು ಎಂದಳಂತೆ..

ನರೇಂದ್ರ ಬೆಳೆದು ಸಾವಿರಾರು ಮೈಲಿ ದೂರ ಸಾಗಿ
ಧರ್ಮದ ವಾಹಕ ಶಕ್ತಿಯಾಗಿ - ವಿವೇಕದ ಆನಂದವಾಗಿ
ಜಗತ್ತಿಗೇ ಧರ್ಮವನ್ನು ಬೆಳಗಿಸಿದನಂತೆ...







ಧರ್ಮವನ್ನು ಬೆಳಗಿಸಿದವನ ದಿವ್ಯ ಪ್ರತಿಮೆಯ ಎದುರು ಕುಳಿತು ಆ ದಿವ್ಯ ತೇಜಸ್ವಿಯನ್ನು ದಿಟ್ಟಿಸಿದಾಗ ಯಾಕೆ
ಮತ್ತೊಬ್ಬ ವಿವೇಕಾನಂದ ಹುಟ್ಟಲಿಲ್ಲ ಎನಿಸಿತು. ಮರುಘಳಿಗೆ ವಿವೇಕಾನಂದ ಹುಟ್ಟಿದ್ದಲ್ಲ, ಬೆಳೆದದ್ದು, ಬೆಳೆಸಿಕೊಂಡಿದ್ದು ಎನಿಸಿತು.

ನಿನ್ನೆದುರು ಕುಳಿತು ಏನು ಕೇಳಲಿ ನಿನ್ನ ಬಳಿ ಇರುವುದನ್ನು ತಾನೇ ಕೇಳಬೇಕು?

ನಿನ್ನ ದಿವ್ಯ ತೇಜಸ್ಸನ್ನು ಕೇಳಲೇ?

ನಿನ್ನೊಳಗಿನ ದೇಶ ಭಕ್ತಿಯನ್ನು ಕೇಳಲೇ?

ನೀನೇನೋ ಕೊಡುಗೈ ದಾನಿಯೇ.. ಕೊಟ್ಟೂಬಿಟ್ಟಿಯ....!

ಆದರೆ ನೀ ಕೊಟ್ಟಿದ್ದನ್ನು ನನ್ನೊಳಗೆ ಬಿಟ್ಟುಕೊಳ್ಳುವ ಶಕ್ತಿ ನನಗೆಷ್ಟಿದೆ?

ನಿನ್ನ ಆ ಶುದ್ದ ಕಣ್ಣುಗಳನ್ನು ನೋಡಿದರೆ ಸಾಕು ಅದ್ಯಾವುದೋ ದಿವ್ಯ ತೇಜಸ್ಸು ದೇಹವನ್ನಾವರಿಸುತ್ತದೆ ನಿಜ...

ಆದರೆ ಅದು ನಿನ್ನೆದುರು ಇರುವಾಗ ಮಾತ್ರ...

ನಿನ್ನೆದುರಿಂದ ಎದ್ದ ಮರುಕ್ಷಣ ಅದನ್ನು ದೇಹದಲ್ಲಿಟ್ಟುಕೊಳ್ಳುವ ಶಕ್ತಿ ನನಗಿಲ್ಲದಿರುವುದು ನನ್ನ ಬಲಹೀನತೆ...

ನಾನೋ ಸಾಮಾನ್ಯರಲ್ಲಿ ಸಾಮಾನ್ಯ...

ನಿನ್ನ ಸುತ್ತ ಹತ್ತು ಪ್ರದಕ್ಷಣೆ ಹಾಕಿ ಇಪ್ಪತ್ತು ಬಾರಿ ನಮಸ್ಕಾರ ಮಾಡಿ ಅಡ್ಡಬಿದ್ದೇನು...

ಅಷ್ಟೇ.........

ಮತ್ತೇನು ಮಾಡಲು ಸಾಧ್ಯ ನನ್ನಿಂದ?

ನೀನು ಕೊಡುವುದು ಪರಿಪೂರ್ಣ ದೇಶಭಕ್ತಿಯನ್ನ, ಧರ್ಮದ ಆತ್ಮ ಶಕ್ತಿಯನ್ನ - ಆದರೆ ನನಗೆ ಬೇಕಿರುವುದು...?

ಈಗ ಉಳಿದಿರುವುದು ಒಂದೇ ದಾರಿ ನನಗೆ ಬೇಕಿರುವುದನ್ನೇ ಬದಲಾಯಿಸಿಕೊಳ್ಳಬೇಕು...

ಆ ಶಕ್ತಿಯಾದರೂ ಇದೆಯಾ ನನ್ನಲ್ಲಿ..?

ಇದ್ದಂತಿಲ್ಲ...

ಓ ದಿವ್ಯ ತೇಜಸ್ವಿಯೇ....!

ನೀ ಕೊಡುವುದನ್ನು ನನ್ನೊಳಗೆ ಇಟ್ಟುಕೊಳ್ಳುವ ಬುದ್ಧಿ ಕೊಡು ಎಂದು ಕೇಳಬೇಕೆನಿಸಿತು....
ಆದರೆ ಬುದ್ಧಿ ಇರುವುದು ನನ್ನ ಹತೋಟಿಯಲ್ಲೇ ಅಲ್ವಾ... ನಾನೇನು ಕೇಳಲಾರೆ ಸುಮ್ಮನೆ ದಿಟ್ಟಿಸುವೆ
ನಿನ್ನ ಅದೇ ಪ್ರಜ್ವಲಿಸುವ ಕಣ್ಣುಗಳನ್ನು ನನ್ನೊಳಗೂ ಒಂದು ಅವ್ಯಕ್ತ ಶಕ್ತಿ ಬರುವುದಾದರೆ ಬರಲಿ
ಕಡೆಯ ಪಕ್ಷ ನನ್ನಂತರಾತ್ಮವಾದರೂ ಬೆಳಗಲಿ ಜ್ಞಾನವೆಂಬ ಬೆಳಕಿನಿಂದ..

Tuesday 1 July 2014

ನಾನೆಂಬ ಮಹಾನ್ ಸ್ವಾರ್ಥಿಯ ಕನಸು..

ತೊನೆಯಬೇಕು ನಾನು ಶುಭ್ರ ಸಾಗರವಾಗಿ...
ನಕ್ಕು ಹೊಳೆಯಬೇಕು ಕಡಲ ಮುತ್ತಾಗಿ...
ಸಲಿಲದ ಆಳ ಅಗಲವ ಅಳೆಯಬೇಕು ಮೀನಾಗಿ... 
ಯಾರಿಗಾಗಿಯೂ ಅಲ್ಲ... 
ಕೇವಲ ನನಗಾಗಿ ಮತ್ತು ನಾನು ನಾನಾಗಿ .....

ಒಮ್ಮೆ ಹಾರಬೇಕು ಮುಗಿಲೆತ್ತರಕ್ಕೆ...
ಹಕ್ಕಿಗೆ ಸ್ಪರ್ಧೆ ಕೊಡಲಲ್ಲ... 
ಯಾವ ದಾಖಲೆಗೂ ಅಲ್ಲ...
ಸ್ವಾತಂತ್ರ‍್ಯದ ಸಾಕ್ಷಿಯಾಗಿ...
ಹಕ್ಕಿ ಮನಸಿನ ಖುಷಿಗಾಗಿ.....

ಅರಳಬೇಕು ನಾನು ಪರಿಮಳದ ಹೂವಾಗಿ.. 
ಯಾವುದೋ ಗುಡಿ ಶಿಲೆಯ ಅಲಂಕರಿಸಲಲ್ಲಾ...
ಯಾರದೋ ಮುಡಿಯಲ್ಲಿ ಬಾಡಲಲ್ಲಾ... 
ಇನ್ಯಾರದೋ ಸಂದೇಶ ಭಾಷಾಂತರಿಸಲಲ್ಲ... 
ನನ್ನಾತ್ಮ ಸುಮದ ಚೆಂದವ ಕಾಣುವುದಕ್ಕಾಗಿ... 

ಒಮ್ಮೆ ಅಲೆಮಾರಿಯಂತೆ ಅಲೆಯಬೇಕು... 
ಯಾರನ್ನೂ ಹುಡುಕುವುದಕ್ಕಲ್ಲ... 
ನನ್ನನ್ನು ಯಾರಿಗೋ ಪರಿಚಯಿಸುವುದಕ್ಕೂ ಅಲ್ಲ... 
ನನ್ನೊಳಗಿನ ನನ್ನನ್ನು ಕಂಡುಕೊಳ್ಳುವುದಕ್ಕಾಗಿ...
ಅರಿವಿನ ಜೇನನ್ನು ಸವಿಯುವುದಕ್ಕಾಗಿ.....