Tuesday 18 February 2020

ಒಂದು ಭಿನ್ನಹ.......

ನನ್ನೊಳಗೆ ಸೋಜಿಗವಾಗಿ ಕುಳಿತ ಮನಸ್ಸೆಂಬ ನಿನಗೆ,

ಈ ಮಹಾನಗರದಲ್ಲಿ ನನ್ನನ್ನು ಹುಡುಕುತ್ತಲೇ ಪ್ರತಿ ಕ್ಷಣವೂ ಕಳೆದು ಹೋಗುತ್ತಿದ್ದೇನೆ. ಇಲ್ಲಿ ಬಂದು ಸುಮಾರು ೬ ವರುಷಗಳಾದರೂ ನಗರ ನನ್ನೊಳಗೆ  ಮಹಾ ಸೋಜಿಗವೊಂದನ್ನ ಪ್ರತಿ ದಿನವೂ ಸೃಷ್ಟಿಸುತ್ತಿದೆ. ನಾಲ್ಕೇ ಮನೆಗಳ ಪುಟ್ಟ ಹಳ್ಳಿ ಇಂದ ಬಂದ ಮಹಾನ್ ಹಠಮಾರಿ ನಾನು. ನಿಜಕ್ಕೂ ಒಂದು ಕನಸಿನಂತೆ ಕಾಣುತ್ತದೆ ನಗರ ನನ್ನೊಳಗೆ. 

ಜನಸಂಖ್ಯೆಯ ಪುಸ್ತಕದಲ್ಲಿ ಓದಿದ್ದೆನಾದರೂ ಇಲ್ಲಿ ಇರುವ ಜನಗಳನ್ನು ನೋಡಿದರೆ ಎಲ್ಲೋ ಭ್ರಮೆಯ ಸ್ಟಷ್ಟಿಯೇನೋ, ಎನಿಸಿಬಿಡುತ್ತದೆ. ನಂಗೆ ಯಾರು ಆಗದ, ಆದರೆ ದಾರಿಯ ಪ್ರತಿ ತಿರುವಿನಲ್ಲೂ ಸಿಗುವ ನನ್ನಂತಹುದೇ ಜೀವಿಯ ಬದುಕು ವಿಸ್ಮಯವಾಗುತ್ತದೆ ನಂಗೆ. 

ಯಾಕೆ? ದೇವರೆಂದು ಹೆಸರಿಟ್ಟುಕೊಂಡು, ಯಾರಿಗೂ ಕಾಣದ ಜಾಗದಲ್ಲಿ ಇದ್ದರೂ, ಇಲ್ಲದಂತೆ ಇಲ್ಲದೆಯೂ, ಇದ್ದಂತೆ ನಾಟಕವಾಡುವ ನೀನು ಮನುಷ್ಯನನ್ನು ವಿಶೇಷವಾಗಿ ಸೃಷ್ಟಿಸಿದ ಕಾರಣವಾದರೂ ಏನು? ನಿನ್ನ ಪೂಜಿಸುವ ಜೀವವೊಂದು ಬೇಕು ಎನ್ನುವ ಸ್ವಾರ್ಥವ? ಇಲ್ಲ, ನಿನ್ನ ಸೃಷ್ಟಿಯ ಗರ್ವದ ಸಂಕೇತವಾ? 

ಕೆಲವೊಮ್ಮೆ ಸೋಜಿಗವಾಗುತ್ತದೆ, ಕೆಲವೊಮ್ಮೆ ಅಸಹ್ಯವೂ....  ಏನೆಲ್ಲಾ ಮಾಡಿದ ಮನುಷ್ಯ ಜೀವಿ...  ನದಿಯ ಆಳಕ್ಕೆ ಇಳಿಯಬಲ್ಲ, ಮುಗಿಲೆತ್ತರಕ್ಕೆ ಹಾರಬಲ್ಲ, ಏನೇನೂ ಕಲ್ಪಿಸಿಕೊಳ್ಳಬಲ್ಲ, ತರಂಗಗಳಲ್ಲಿ ಮಾತನ್ನು ಹರಿಬಿಡಬಲ್ಲ, ಎಲ್ಲೋ ಇರುವುದನ್ನು ಇಲ್ಲೇ ಇರುವಂತೆ ತೋರಿಸಬಲ್ಲ. ತಂತ್ರಜ್ಞಾನದ ಸಾಧನೆಯ ನೆನೆದರೆ ನಾನೂ ಇದೇ ಜಾತಿಗೆ ಸೇರಿರುವ ಜೀವಿಯೇ ಎಂದು ಹೆಮ್ಮೆ ನಂಗೆ. 

ಹಾಗೆಯೆ, ಕೆಲವೊಂದು ಸೂಕ್ಷ್ಮತೆಯ ಅರಿಯದೇ ಕಂಡ ಕಂಡಲ್ಲಿ ಹೊಲಸು ಮಾಡುವ, ತನ್ನ ಇರುವಿಗೆಯ ಸಾರ್ಥಕತೆಯ, ಯೋಚನೆಯೇ ಇಲ್ಲದೆ, ಭಾವನೆಗಳ ಬೆಂಕಿಯಲ್ಲಿ ದಿನವೂ  ತನ್ನ ತಾನು ಸುಟ್ಟುಕೊಳ್ಳುತ್ತಾ ಬದುಕುವುದ ಕಂಡರೆ ಅಸಹ್ಯವೂ ಬರುತ್ತದೆ.

ದೇವರೇ.. 

ಮನುಷ್ಯನ ಸೃಷ್ಟಿಯ ಪ್ರತಿಯೊಂದಕ್ಕೂ ಒಂದು ಕಾರಣವಿದೆ. ಅದಕ್ಕೆ ಅವಶ್ಯಕತೆ ಎಂದಾಗಲಿ,ಮನೋರಂಜನೆ ಎಂದಾಗಲಿ ಏನೋ ನಾವು ಹೆಸರನ್ನೂ ಇಟ್ಟುಕೊಂಡಿದ್ದೇವೆ. ಆದರೆ, ನಿನ್ನ ಸೃಷ್ಟಿಯಾದ ನಮ್ಮ ಇರುವಿಕೆಗೆ ಕಾರಣವೇನು? ಸುಮ್ಮನೆ ಉಸಿರಾಡಿ, ತಿಂದುಂಡು ಬದುಕನ್ನು ರಾಡಿ ಮಾಡಿಕೊಂಡು, ಒಂದಷ್ಟು ಪ್ರೀತಿ-ಬೇಸರ, ಕಣ್ಣೀರು-ನಗು ಎಲ್ಲವನ್ನೂ ಅನುಭವಿಸಿ ಸತ್ತು ಪ್ರಕೃತಿಯ ಮಡಿಲ ಸೇರಲಿಯೆಂದ?

ನಿಂಗೆ ನಾವುಗಳೂ ಮನರಂಜನೆಯ ಅವಶ್ಯಕತೆಗಳ? ಗೊತ್ತಿಲ್ಲ ನಂಗೆ.... 


ಬಯಕೆಯೊಂದೇ... 
ಪ್ರತಿ ಉಸಿರಿಗೂ ಒಂದಷ್ಟು ಕಾರಣಗಳ ಸೃಷ್ಟಿಸು, ಕಾರಣಗಳಿಲ್ಲದೇಯೂ ಬದುಕುವ ಅವಶ್ಯಕತೆಗಳ ಸೃಷ್ಟಿಸು. ಇರುವೆ ಗೂಡಂತೆ ಕಾಣುವ ನನ್ನಂತಹುದೇ ಜೀವಿಯ ಇರುವಿಕೆಗೆ ಕಾರಣಗಳ ಕೊಡು. ಒಂದಷ್ಟು ಸೂಕ್ಷ್ಮ ಭಾವನೆಗಳ ಕೊಡು. ಎಲ್ಲರೆಡೆಗೆ ಪ್ರೀತಿ ಸ್ನೇಹವನ್ನು ಇನ್ನಷ್ಟು ಕೊಡು. 

ಮನುಷ್ಯರು ನಾವು ಪ್ರತಿ ವಸ್ತುವನ್ನು ಹೊಸ ಆವೃತ್ತಿಯಲ್ಲಿ ಹೊರತರುವಾಗ ಇನ್ನು ವಿಶೇಷವಾಗಿ ತಪ್ಪುಗಳನ್ನು  ತಿದ್ದಿ ಪರಿಚಯಿಸುತ್ತೇವೆ.ಹಾಗೆಯೇ ನಮ್ಮ ಹೊಸ ದಿನಗಳನ್ನು ಇನ್ನು ಪರಿಷ್ಕರಿಸಿ ಇನ್ನಷ್ಟು ಮಾನವೀಯತೆಯನ್ನು, ದೈವಿಕತೆಯನ್ನು,ಪ್ರೀತಿ ಸ್ನೇಹವನ್ನೂ ತುಂಬು ಎಂದು ಕತ್ತಲು ಮುಗಿದು ಇನ್ನೊಂದು ಬೆಳಕಿಗೆ ಕಾಯುತ್ತಿರುವ ಈ ಅಭಿಸಾರಿಕೆಯ ಪ್ರಾಥನೆ.....