Sunday 20 August 2017

ಮಹಾನಗರಿಯಲ್ಲಿ ಮೂರು ವರುಷ..‌

ಈ ಮನಸೆಂಬೋ ಸಾಗರದ ನಡು‌ ಮಧ್ಯ ನಿಂತು ಮಾತಾಡಬೇಕು ಎನಿಸುತ್ತಿದೆ. ಆ ಕಡೆ‌ ಒಂದಷ್ಟು ‌ಈ‌ ಕಡೆ‌ ಒಂದಷ್ಟು ‌ಉಪ್ಪುಪ್ಪು ನೀರು. ನಡು‌ಮಧ್ಯ‌ ನಿಂತ‌ ನಂಗೆ‌ ಸಿಹಿನೀರ ಬಯಕೆಯೇ ಇಲ್ಲ. ಬಯಕೆ‌ ದಡ‌ಸೇರುವ ಕನಸಿನದ್ದಾ‌ ಗೊತ್ತಿಲ್ಲ.

ಬೆಂಗಳೂರೆಂಬೋ ಮಹಾ‌ಗರ್ಭಕ್ಕೆ‌ ಬಂದು‌ಸೇರಿ‌ ಮೂರು‌ ವರುಷಗಳು‌ ಕಳೆದವು. ಇಲ್ಲಿ‌ಪಡೆದದ್ದು‌ ಕಳೆದದ್ದು ಎಲ್ಲವೂ‌ ಇದೆ. ಬದುಕಿಗೋಸ್ಕರ‌ ನಡೆಸುವ‌ ಹೋರಾಟವಿದೆ. ನನ್ನಂತದೇ‌ ಸಾವಿರ‌ಕನಸುಗಳ ಪರದಾಟವನ್ನೂ‌ ಕಂಡಿದ್ದೇನೆ. ಬದುಕೆಂದರೆ‌ ಹೊಟ್ಟೆ‌ತುಂಬಿಸಿಕೊಳ್ಳುವ‌ ಹೋರಾಟವಷ್ಟೇ‌ ಅಲ್ಲವಾ? ಮನಸು‌, ಪ್ರೀತಿ‌, ಭಾವನೆ‌ ಎಲ್ಲವೂ‌ ನಂತರ ಅನಿಸಿದೆ‌. ಆದರೆ‌ ಅದೆಷ್ಟೋ‌ ಬಾರಿ‌ ತರಕಾರಿ ಮಾರುವ‌ವ‌ ಬಿಸಿಲಲ್ಲ, ಬರಗಾಲಲ್ಲಿ ಮನೆ‌ಮನೆಯ‌ ಅಲೆಯುವುದು‌ ಮನೆಯಲ್ಲಿ‌ ಕಾಯುವ ಯಾರದೋ‌ ಮೇಲಿನ‌ ಪ್ರೀತಿಗೆ‌ ಅಲ್ಲವಾ‌ ಅಂತಲೂ ಎನಿಸಿದೆ.

ಇಲ್ಲಿ‌ ಬಂದಾಗಿನಿಂದ‌ ಪ್ರತಿ‌ ನಿತ್ಯವೂ ಬದುಕ ಹೊಸ ಹೊಸ ಪಾಠ ಕಲಿಯುತ್ತಿದ್ದೇನೆ. ಕಾಲು ನೋಯುವಷ್ಟು‌ ನಡೆದಿದ್ದೇನೆ.  ಕಾಲು ನೋವೆಂದು‌ ನಡೆಯಲೂ‌ ಆಗದೇ‌ ಮಲಗಿದ್ದೇನೆ. ಕೊಟ್ಟ ದುಡ್ಡಿಗೆ‌ ಚಿಲ್ಲರೆ‌‌ ಕೊಡದೇ ಮೋಸ‌ಮಾಡಿದ‌‌ವನಿಂದ‌‌ ಹಿಡಿದು, ನಡೆಯಲೂ‌ ಕಷ್ಟಪಡುವ  ಯಾರೋ ಮಹಾ‌ತಾಯಿ ಅದ್ಯಾವುದೋ ದಾರಿ‌ ತೋರಿಸಿದ್ದೂ‌‌ ಇದೆ.

ಕಣ್ಣು‌ಹಾಯಿಸಿದಷ್ಟೂ‌ ದೂ‌ರಕ್ಕೆ‌ ಮನುಷ್ಯರೇ‌ ಕಾಣುವ‌ ಇಲ್ಲಿ ತೀರಾ‌ಕಾಡಿದ್ದು ಒಂಟಿತನದ ಹಸಿವು. ಯಾವಾಗಲೂ ಓಡಾಡುತ್ತಲೇ ಇರುವ ಮನುಷ್ಯ ಸಾಗುತ್ತಿರುವ ದಾರಿ ಮತ್ತು ಸೇರುವ ಗುರಿ ಮಾತ್ರ ನಿಗೂಢವೇ ಸರಿ. ಮಾತು ಬರದ ಸಾವಿರ ಮರಗಳು  ಸುತ್ತ ಇದ್ದರೆ‌ ಬರದ ಒಂಟಿತನ ಮಾತು ಬರುವ ಹತ್ತು ಜನ ಸುತ್ತ ಇದ್ದರೆ ಹೆಚ್ಚುತ್ತದೆ. ಮನುಷ್ಯ ಒಂಟಿತನವ ಕಳೆಯಲು ಸಂಬಂಧಗಳ ಕಟ್ಟಿಕೊಂಡ ಮತ್ತು ಕಟ್ಟಿಕೊಂಡ ಸಂಬಂಧಗಳಿಂದ ಒಂಟಿತನವ ಸುತ್ತಿಕೊಂಡ. ಮನುಷ್ಯ ‌ಒಂಟಿಯಾದಷ್ಟು‌ ಕನಸುಗಾರನಾಗುತ್ತಾನೆ. ತನ್ನ ತಾನು ಪ್ರೀತಿಸಿಕೊಂಡಷ್ಟು ಕ್ರೀಯಾಶೀಲನಾಗುತ್ತಾನೆ. ಕ್ರೀಯಾಶೀಲತೆ ಮತ್ತಷ್ಟು ‌ಪ್ರೀತಿಸಿಕೊಳ್ಳುವಂತೆ ಮಾಡುತ್ತದೆ.

ಮಹಾನಗರಿಯಲ್ಲಿ ಮನೆ ಕಟ್ಟುವುದು‌, ಮನೆ ಒಡೆಯುವುದು ಎರಡು ಬಹು‌‌ಸುಲಭ ಹಾಗೆಯೇ ಮನಸುಗಳನ್ನೂ.... ಆದರೆ ಮಾತು‌, ಮುತ್ತಷ್ಟು‌ ಸುಲಭವಲ್ಲ ಇಲ್ಲಿ. ಮುತ್ತು‌ಸಿಕ್ಕಷ್ಟು‌ ಸುಲಭವಲ್ಲ ಮುತ್ತಿನಂಥ‌ ಮಾತು‌ಸಿಗುವುದು. ಮನಸು‌ ಗೆಲ್ಲುವುದು‌ ಕಷ್ಟವಲ್ಲ ಅಷ್ಟಕ್ಕೂ‌ ಮನಸಿಗೆ‌ ಅರ್ಥವಿಲ್ಲ. ಗೆಲುವಿಗೆ ಬೆಲೆಯಿಲ್ಲ.

ನದಿ ಹರಿಯುವಾಗ‌ ಮಾತ್ರ ಅದಕ್ಕೆ ಅದರದ್ದೆ  ಹೆಸರು‌.  ಹಾದಿಬೀದಿಯವರೆಲ್ಲ ಅದನ್ನು‌ಹೊಗಳಿದ್ದೆ‌. ಆದರೆ ಅದು‌‌ ಯಾವತ್ತು‌ ಸಾಗರನ ಸೇರಿಕೊಂಡಿತೋ ಅದರ ಅಸ್ತಿತ್ವಕ್ಕೆ ‌ಬೆಲೆಯಿಲ್ಲ ಕಡೆಗೆ ಅದು‌ ಸಾಗರನ ಸೇರಿದ್ದರ ಕುರುಹೂ‌ ಇಲ್ಲ. ಮಹಾನಗರಿಯೂ‌ ಹೀಗೆಯೇ.

ಸಾವಿರ‌ ನದಿಗಳು‌ ಸೇರಿಯೇ ಸಾಗರವಾಗಿದ್ದು ಆದರೆ‌ ಒಮ್ಮೆ ಸಾಗರವ ಸೇರಿದ‌ ಮೇಲೆ‌ ನದಿಗೆ ಅದರ ಮೂಲ ಹರಿವಿಲ್ಲ, ಬಣ್ಣವಿಲ್ಲ ಮತ್ತು ರುಚಿಯೂ ಇಲ್ಲ. ಮೂ‌ಲ  ಸ್ವಭಾವವೇ ಉಳಿಯದ ಮೇಲೆ‌ ಅದು ನದಿಯಾಗಿ‌ ಉಳಿಯುವುದಾದರೂ‌ ಹೇಗೆ?
ಮಹಾನಗರಿಯೂ ಅಷ್ಟೇ, ವೇಷಭೂಷಣದಿಂದ‌ ಹಿಡಿದು ಯೋಚಿಸುವ ರೀತಿಯನ್ನೇ‌ ಬದಲಾಯಿಸುತ್ತದೆ. ಬದಲಾಯಿಸಿಕೊಳ್ಳಲು‌ ಯಾರೂ ಹೇಳಿಲ್ಲ ಆದರೂ ಬದಲಾವಣೆ‌ ಇಲ್ಲಿಯ‌ ನಿಯಮ. 
ಬದಲಾಗಿದ್ದಕ್ಕೆ ಬೇಸರವಿಲ್ಲ ಹಾಗೆಯೇ,‌ ಅಸ್ತಿತ್ವದ‌ ಹುಡುಕಾಟಕ್ಕೂ.  ಬಾಹ್ಯ ಬದಲಾವಣೆಯೇ ಬದುಕ ಬದಲಾವಣೆಯಲ್ಲ. ಮಹಾನಗರಿ ಆಂತರಿಕ ಬದಲಾವಣೆಯನ್ನೂ ಮಾಡುತ್ತಲೇ ಇರುತ್ತದೆ.

ಸುಲಭವಿರಲಿಲ್ಲ, ಕಾಡಿನಲ್ಲಿ ಒಂಟಿಯಾಗಿ
ಹರಿವಾಗ‌ ಸಿಕ್ಕ ಹೆಸರನ್ನು ಉಳಿಸಿಕೊಳ್ಳುವುದು. ಅಲ್ಲಿದ್ದಾಗ ಮಾತ್ರ ಕಾವೇರಿ,ಗೋಧಾವರಿ,ಕಾಳಿ‌ ಸಾಗರವ‌ ಸೇರಿದ‌ ಮೇಲೆ ಅದು‌ ಸಾಗರ‌ ಅಷ್ಟೇ.  ಇಲ್ಲೂ ಅಷ್ಟೇ ಒಮ್ಮೆ ಗುಂಪ ಸೇರಿದೆಯೋ ನೀನೂ‌ ಗುಂಪಿನ‌ ಒಬ್ಬ ಸದಸ್ಯ ಮಾತ್ರ. ಆದರೆ ಗುಂಪಿನ  ಸದಸ್ಯತ್ವವೂ ಒಂಥರ ಖುಷಿಯೇ. ಬದಲಾವಣೆಗೆ ಹಸ್ತ‌ ಚಾಚುವ ನಗರಿ‌ ಬದಲಾಗಲಾರೆ‌ ಎಂದರೆ‌ ಅಲ್ಲೇ ಇರು‌ ಎಂದು‌ ಮುಂದೆ ‌ಸಾಗುತ್ತದೆ.
ನಾನು‌ ಎಂಬುದಕ್ಕೆ‌ ಸಾವಿರ‌ ಅರ್ಥ. ಕಳೆದೋದೆ ಎಂದರೆ ಶೂನ್ಯ ಭಾವ, ಬದಲಾದೆ ಎಂದರೆ‌ ಪ್ರಗತಿಯ ಸಂಕೇತ.

ನಾನೇನೂ ಮಹಾನಗರಿಯ ದ್ವೇಷಿ‌ ಅಲ್ಲ. ಇಲ್ಲಿ ನನ್ನ ಬದುಕಿಗೊಂದು‌ ಸ್ವಾಭಿಮಾನ ‌ಸಿಕ್ಕಿದೆ. ಸಂಬಳ ಬಂದ ದಿನದ‌ ಖುಷಿಯೇ ತಿಂಗಳ ಪೂರ್ತಿ ಇರಲಾರದು‌ ಆದರೆ‌ ಮತ್ತೆ ಖುಷಿಪಡುವ ದಿನ‌ ಬಂದೇ ಬರುತ್ತದೆ.  ಈ ಬಕಾಸುರನಂಥ ಬೆಂಗಳೂರಲ್ಲಿ ಪ್ರತಿ ಕ್ಷಣವೂ ನನ್ನನ್ನ ಹುಡುಕಿಕೊಳ್ಳುವ ಖುಷಿಯಿದೆ. ಸೋತರು‌ ಗೆದ್ದರೂ ನಂಗೆ ನಾನು‌ ಸಂಪೂರ್ಣ ‌ದಕ್ಕಿದ್ದೇನೆ. ಗೆಲುವಿನ ಅರ್ಥ ವಿಶಾಲವಾಗಿದೆ. ಇಷ್ಟಕ್ಕೂ ಬದುಕು ಮತ್ತು ಗೆಲುವು ಯಾರೋ ವ್ಯಾಖ್ಯಾನಿಸಿ ಬರೆದಿಟ್ಟ ಸಂವಿಧಾನದ ಸಾಲುಗಳಲ್ಲ. ಪ್ರತಿದಿನಕ್ಕೂ ನಮ್ಮೊಳಗೆ ಹುಟ್ಟಿ ಹೊಸ ಅರ್ಥ ಕೊಡುವ ಕಾವ್ಯದ ಹಾಗೇ ಅಲ್ಲವಾ??

Wednesday 5 July 2017

ನಾನು.....!?

ನಾನು ಕಡಲಾಗಬೇಕಿತ್ತು
ನೋವುಗಳ ದಡಕೆಸೆದು ಶುಭ್ರವಾಗಬಹುದಿತ್ತು
ಹೊಸ ಹೊಸ ಅಲೆಯಾಗಿ ಮುನ್ನುಗ್ಗಬಹುದಿತ್ತು
ನನ್ನದೇ ಅಂತರಂಗವ ಮಂಥಿಸಿಕೊಂಡು ನಿರಾಳವಾಗಬಹುದಿತ್ತು.

ನಾನು ಮರವಾಗಬೇಕಿತ್ತು.
ದಿನ ದಿನವೂ ಹಸಿರ ಕನಸ ಚಿಗುರಿಸಬಹುದಿತ್ತು
ಕಳೆದ ನೋವುಗಳ ಎಲೆಗಳಾಗಿ ಉದುರಿಸಿಬಿಡಬಹುದಿತ್ತು.
ಎಲ್ಲವೂ ತಿಳಿದೂ ಯಾವುದಕ್ಕೂ ಸ್ಪಂದಿಸದೇ ನಿಂತುಬಿಡಬಹುದಾಗಿತ್ತು.

ಸುಮ್ಮನೆ ಬೇಕೆನಿಸಿದಾಗ ಓದುವ ಪತ್ರಿಕೆಯಾಗಬೇಕಿತ್ತು.
ಇಂದಿನದನ್ನ ಇಂದಿಗೆ ಅರ್ಥೈಸಿಕೊಳ್ಳಬಹುದಿತ್ತು.
ನಿನ್ನೆಗಳ ಹರಿದೆಸೆಯಬಹುದಿತ್ತು
ಯಾರದೋ ಭಾವಕ್ಕೆ ಅಕ್ಷರವಾಗಬಹುದಿತ್ತು.

ಆದರೆ ನಾನು ಕೇವಲ ನಾನಾದೆ ಮತ್ತು ನನ್ನೊಳಗಿನ‌ ನನ್ನ ಹುಡುಕಿಕೊಳ್ಳುವ ಹಠಕ್ಕೆ ಶರಣಾದೆ.

Thursday 6 April 2017

ಅಂಕದ ಪ್ರೇರಕನಿಗೆ.......

ಬದುಕೆಂಬೋ ನಾಟಕದ ರಂಗಸ್ಥಳದಲ್ಲಿ ಜಾರಿದ್ದು ಇನ್ನೊಂದು ಅಂಕ. ಒಂದೆರಡು ಅಂಕ ಮುಗಿದರೆ ಮುಗಿಯುವ ನಾಟಕವಲ್ಲ ಇದು. ಯಾಕೆಂದರೆ ಇದು ಬದುಕಿನಾಟ. ಒಂದು ಅಂಕ ಮುಗಿದೊಡನೆ ಇನ್ನೊಂದು ಅಂಕಕ್ಕೆ ಸಿದ್ಧತೆ ನಡೆಸಬೇಕು. ಅದೇ  ಪಾತ್ರಧಾರಿಗಳೇ ಎಲ್ಲೊ ಒಂದೋ ಎರಡೋ ಹೊಸ ಪಾತ್ರಗಳು ಬಂದೀತು ಆದರೆ ಆಡುವ ಮಾತು ಮತ್ತು ಮುಖವಾಡಗಳು ಎಲ್ಲರದ್ದು ಒಂದೇ ನನ್ನನ್ನೂ ಒಳಗೊಂಡು.

ಹೇಳಿದ್ದೆ ಮಾತನ್ನೇ ಹೇಳಿದರೂ, ಅದೇ ಮುಖವಾಡಗಳನ್ನ ಹಾಕಿಕೊಂಡರೂ ಪ್ರೇಕ್ಷಕ ಇಷ್ಟಪಡುವುದಿಲ್ಲ. ಯಾಕೆಂದರೆ ಪ್ರೇಕ್ಷಕ ಎದುರುಗಡೆ ಇಲ್ಲ. ಇಲ್ಲೇ ನನ್ನೊಳಗೆ ಇದ್ದಾನೆ. ಮತ್ತು ಈ ಪ್ರೇಕ್ಷಕ ಬೇಸರ ಬಂತೆಂದು ಎದ್ದು ಹೋಗುವುದೂ ಇಲ್ಲ. ಹಾಗಂತ ಮಾಡಿದ್ದೆಲ್ಲವನ್ನು ಮೆಚ್ಚಿ ಬಹುಮಾನವನ್ನೂ ಕೊಡುವುದಿಲ್ಲ. ಅವ ಒಂಥರ  ವಿಮರ್ಶಕ, ಸರಿ ಮಾಡಿದ್ದನ್ನೂ ವಿಮರ್ಶಿಸುತ್ತಾನೆ ಮತ್ತು ತಪ್ಪು ಮಾಡಿದರೂ ಪ್ರಶಿಸುತ್ತಾನೆ, ಸಮರ್ಥಿಸುತ್ತಾನೆ.

ಒಟ್ಟಿನಲ್ಲಿ ನನ್ನೊಳಗಿನ ಈ ಪ್ರೇಕ್ಷಕನಿಗಾಗಿ ಮಾತ್ರ  ಈ ಮುಂದಿನ ಅಂಕ ಕೂಡ. ನಾ ಬಣ್ಣದ ಮೋಡಿಗೆ ಬಿದ್ದಾಗ ಅವ ಕೆಲವೊಮ್ಮೆ ಹೇಳುತ್ತಾನೆ ನಿಂಗೆ ಯಾವ ಬಣ್ಣದ  ಅವಶ್ಯಕತೆಯೂ ಇಲ್ಲ ನೀನು ಹೀಗೇ ಚಂದ ಎಂದು ಆಗೆಲ್ಲ ನಾ ವಾದಿಸುತ್ತೇನೆ ಬಣ್ಣಬೇಡ ಎನ್ನುತ್ತೀಯಲ್ಲ ನಾಟಕವೂ ಬೇಡ ಎಂದುಬಿಡು ಎಂದು. ಅದಕ್ಕವ ನಗುತ್ತಾ ವಿವರಿಸುತ್ತಾನೆ, ನಾಟಕವೆಂದರೆ ಬರಿಯ ಸುಳ್ಳು ಎಂತಲೇ ಅಲ್ಲ ಮುಖವಾಡದ ಹಿಂದೂ ಮುಖಗಳಿವೆ ಮತ್ತು ಪ್ರತಿ ಮುಖಕ್ಕೂ ಹತ್ತಾರು ಭಾವಗಳಿವೆ. ಎಲ್ಲೋ ನಿನ್ನೊಳಗೆ ಇಳಿದ ಭಾವ ತೀವ್ರತೆಯ  ಪ್ರಸ್ತುತಿಯೇ ನಾಟಕ ಎಂದು. 
ಯಾರದೋ ಬಳಿ  ಪ್ರೀತಿಯನ್ನೇ ವ್ಯಕ್ತಪಡಿಸಿದೆ ಎಂದಾದರೆ ಅದರ ಹಿಂದೊಂದು ಭಾವ ಇರಲೇಬೇಕಲ್ಲ.

ಕಲೆಯಿಲ್ಲದ ಯಾವ ಕಲಾವಿದನೂ ರಂಗಸ್ಥಳ ಹತ್ತಲಾರ. ಹತ್ತಲು ನಾನೂ ಬಿಡಲಾರೆ ಎಂದು ನಕ್ಕುಬಿಟ್ಟ ನನ್ನೊಳಗಿನ‌ ಪ್ರೇಕ್ಷಕ. ನಾನು ಅವನನ್ನ ನಂಬುತ್ತೇನೆ ನನ್ನೋಳಗಿನ ಪ್ರೇಕ್ಷಕನೇ ನನ್ನ ನಿಜ ಪ್ರೋತ್ಸಾಹಕ. ಅವನಿಲ್ಲದೇ ಯಾವ ನಾಟಕವೂ ಇಲ್ಲ. ಅವನೊಬ್ಬ ಸಂತೃಪ್ತನಾದರೆ ಸಾಕು ಅದೆಷ್ಟು ಬೇಕಾದರೂ ಅಂಕಗಳ ಎಳೆಯಬಹುದು. ಅದೆಲ್ಲದಕ್ಕೂ ಬೇಕಾದ ಹೊಸ ಹುರುಪು ನನ್ನೊಳಗೆ ಹುಟ್ಟೀತು.

ನನ್ನೊಳಗೇ ಇದ್ದೂ ನಂಗೆ ಪ್ರತಿ  ಕ್ಷಣಕ್ಕೂ ಅಪರಿಚಿತನಾಗುತ್ತಾ, ಅರಿತಷ್ಟೂ ಅತಿ ಹೆಚ್ಚು ಆತ್ಮೀಯನಾಗುತ್ತಾ , ನನ್ನೊಳಗೆ ವಿಮರ್ಶಕನಾಗಿ ತಪ್ಪುಗಳ ತಿದ್ದುತ್ತಾ ನನ್ನ ನಿಜ ಸತ್ವವನ್ನು ಪರದೆ ಕಟ್ಟದ ಬದುಕೆಂಬೋ ರಂಗಸ್ಥಳದಲ್ಲಿ ನಿರೂಪಿಸಲು ಸದಾ ಅವಕಾಶವನ್ನು ಮತ್ತೆ ಮತ್ತೆ ಕಟ್ಟಿಕೊಡುತ್ತಿರುವ ನನ್ನೊಳಗಿನ ಪ್ರೇಕ್ಷಕನಿಗೆ ನನ್ನ ಕಳಚಿದ ಮತ್ತು ಬರಲಿರುವ ಅಂಕಗಳು ಸಮರ್ಪಣೆ.

Wednesday 11 January 2017

ಹೊಸ ಪಥದ ಜಾಡು....

ಏನೆಲ್ಲಾ ಇದೆ ಈ ಬದುಕಿನ ಗರ್ಭದಲ್ಲಿ. ಅದೆಂತಹ ಹುಚ್ಚು ನಗು ಮತ್ತು ಕ್ಷುಲ್ಲಕ ಅಳು. ಬದುಕಿನ ಹಸಿವ ಹೆಚ್ಚಿಸುವ ಬಂಧಗಳು, ಬಂಧನವಾಗುವ ಸಂಬಂಧಗಳು, ಕೈಗೆಟುಕದ ಕನಸಿನಂಥ ಆಸೆಗಳು.

ಮನಸೇ,
ಅದೆಷ್ಟು ದಿನವಾಯ್ತು ಮಾತಾಗದೇ, ಎದೆ ಬಿರಿಯೆ ನಗುವಾಗದೆ. ಇನ್ನಾದರೂ ಬದುಕಿನ ಆಳಕ್ಕಿಳಿಯಬೇಕು, ಸಿಗುವ ಚಿಕ್ಕ -ಪುಟ್ಟ ನೋವು - ನಲಿವುಗಳನ್ನ ನನ್ನೊಳಗೆ ಹರಿಯಬಿಡಬೇಕು. ನಿಜ, ನಡೆಯುವ ಹಾದಿಯಲ್ಲಿ ಕಲ್ಲು ಸಿಕ್ಕರೆ ದಾಟಬಹುದು ಕಿತ್ತು ಬಿಸಾಡಬಹುದು ಆದರೆ ಒಲವ ಹೂಗಳು‌ ಸಿಕ್ಕರೆ ನೋಡದೆ ದಾಟುವುದಾದರೂ ಹೇಗೆ? ಕಲ್ಲನ್ನ ಕಿತ್ತಷ್ಟು ಸುಲಭವೂ ಅಲ್ಲ ಒಲವ ಹೂವ ಕಿತ್ತೆಸೆಯುವುದು‌. ಹಾಗಂತ ದಾರಿಯಲ್ಲಿ ಸಿಕ್ಕೆಲ್ಲ ಹೂವುಗಳನ್ನ ಜೊಪಾನ ಮಾಡಲು ಸಾಧ್ಯವಿಲ್ಲ. ಆದರೂ, ಬದುಕೆಂದರೆ ದೇವರಂತಲ್ಲವ; ಕರಗದ ಕಲ್ಲಿನ ಅಡಿ ಮುಡಿಯೆಲ್ಲ ಹೂವೇ ಹೂವು.

ಬದುಕಿಗೆ ಯಾವುದೋ ದೊಡ್ಡ ಅರ್ಥವನ್ನೇ ಕೊಡಬೇಕು ಅಂತೇನಿಲ್ಲ. ಹಾಗೆಯೇ ಬದುಕಲ್ಲಿ ಬರುವ ಬಂಧಗಳಿಗೂ.. ಗಂಡು ಹೆಣ್ಣಿನ ಸಂಬಂಧಗಳೆಲ್ಲವೂ ಪ್ರೇಮವೇ ಆಗಬೇಕು ಮತ್ತು ಕಾಮದಲ್ಲೇ ಕೊನೆಯಾಗಬೇಕು ಎಂದ್ಯಾವ ನಿಯಮಗಳೂ ಇಲ್ಲ. ಸ್ನೇಹವು ಸದಾಕಾಲ ಸ್ನೇಹವಾಗಿಯೇ ಉಳಿಯಬಹುದು. ಯಾರದೋ ಕಣ್ಣಲ್ಲಿ ಬದುಕ ನೋಡುವ ಭಯಪಡುವ ಅಗತ್ಯಗಳಿಲ್ಲ. ಬದುಕು ನಿನ್ನದು ಎಂದಾದ ಮೇಲೆ ಭಾವಗಳು ನಿನ್ನದೊಂದೆ ಆಗಬೇಕು. ಯಾರನ್ನೋ ನಂಬಿಸುವ, ಬದಲಾಯಿಸುವ ಅಗತ್ಯಗಳಿಲ್ಲ.

ನಿನ್ನನ್ನ ಯಾರೋ ಅರ್ಥ ಮಾಡಿಕೊಳ್ಳಲಿ, ನಂಬಲಿ ಎಂದುಕೊಳ್ಳಬೇಡ. ಯಾಕೆಂದರೆ ನಿನ್ನ ನೀ ನಂಬಬೇಕು ನಿನ್ನ ನೀ ಪ್ರೀತಿಸಬೇಕು. ಬದುಕ ಕೊನೆಯವರೆಗೂ ನಿನ್ನೊಡನಿರುವವಳು ನೀ ಮಾತ್ರ. ಏನನ್ನ ಪಡೆದುಕೊಂಡರೂ- ಕಳೆದುಕೊಂಡರೂ ಅದು ನಿನ್ನ ಪಾಲು ಮಾತ್ರ. ಇಲ್ಲಿ ನೋವಿಗೂ- ನಲಿವಿಗೂ ಯಾರೂ ಪಾಲುದಾರರಿಲ್ಲ. ಹೋರಾಟವನ್ನು  ಎಲ್ಲಿಯೂ ನಿಲ್ಲಿಸಬೇಡ. ನಿನ್ನದೇ ಮನಸಿಗೂ ಸೊಲನ್ನು ಒಪ್ಪಿಕೊಳ್ಳುವುದ ಕಲಿಸಬೇಡ. ಸೋಲನ್ನು ಒಪ್ಪಿಕೊಂಡರೆ ಗೆಲುವು ಮರೆಯಾದಂತೆ.

ಆದರೂ ಈಗೀಗ ಚಲನೆಯೆಲ್ಲೋ ನಿಂತುಬಿಟ್ಟಿದೆ. ಸೂರ್ಯ ಚಂದ್ರರ ಮುಖದಲ್ಲೂ ಮೊದಲಿನ‌ ಖುಷಿಯೇ ಇಲ್ಲ. ಮತ್ತೊಮ್ಮೆ ಇದೇ ಪಥದಲ್ಲಿ ಚಲಿಸಬೇಕು. ಹೊಸದಾರಿಯಲ್ಲಿ ಹೊಸ ನಗುವೊಂದನ್ನ ಹುಡುಕುತ್ತಾ.... ಬದುಕ ಬಯಲಾಗಿಸುವತ್ತ... ಬಯಲಾದಷ್ಟೂ ಬೆಳಕು ಸ್ವಂತ...