Monday, 23 June 2025

ನನ್ನೊಳಗೊಂದು ಬೆಳಕು ಮೂಡಲಿ

ಹೇ ಮನವೇ,

ಬಿದ್ದಲ್ಲಿಂದ ಎದ್ದು ಬಂದೆ ಎನ್ನುವಷ್ಟರಲ್ಲಿ ಮತ್ತೆ ಬಿದ್ದಂತೆ ಭಾಸವಾಗುವ ಸೋಲಿನಲ್ಲಿ ಗೆಲುವ ಹುಡುಕುತ್ತ ಗೆಲುವಿನಲ್ಲಿ ಒಲವ ಹುಡುಕುತ್ತ, ನಿದ್ದೆ ಬರದ ರಾತ್ರಿಯಲ್ಲಿ ಹಗಲನ್ನು ದಣಿದ ಹಗಲಿನಲ್ಲಿ ರಾತ್ರಿಯನ್ನೂ, ಹುಡುಕುತ್ತ ಕಳೆಯುತ್ತಿರುವ ಬದುಕಿನಲ್ಲಿ. ಎಷ್ಟೊಂದು ಕಥೆಗಳು ಒಲವ ಬವಣೆಗಳು. 

 ಒಂದಕ್ಕೊಂದು ಸಿಗಲಾರದ ಸಿಕ್ಕಾಗ ಜೊತೆ ಇರಲಾರದ ಅತೀ ಮಳೆಯಾದರೂ ನೊವು ಪಡುವ ಮತ್ತು ಮಳೆಯಾಗದಿದ್ದರೆ ಬರಡಾಗುವ ಇದ್ದದ್ದನ್ನು ಬಿಡಲಾರದ ಮತ್ತು ಬಿಟ್ಟಿದ್ದಕ್ಕೆ ಕಾರಣವ ಹುಡುಕಲಾರದ ವಿರಹದ ಕವಿತೆ ಬರೆವ ಒಲವ ಮಳೆ ಮತ್ತು ಬರಡು ಭೂಮಿ.

ನಕ್ಕು ನಕ್ಕು ಮುಗಿದು, ಕಣ್ಣೀರಾಗುವ ದುಃಖದಲ್ಲಿ ಮುಳುಗಿ ಏಳಲಾಗದೆ, ಮುಳಗಲಾರದೆ ಉಸಿರ ಕಟ್ಟಿ ಉಸಿರ ಚೆಲ್ಲುವ ಅಸಹಾಯಕನ‌ ಭಾವದಲ್ಲಿ.

ಬದುಕುವ ಆಸೆಯ ಜೊತೆಗೆ ಬಂದಿಕ್ಕುವ ಭಯದಲ್ಲಿ, ಭಯದ ಹಿಂದೆಯೆ ನಿಂತು ನಗುವ ಬದುಕ‌ ಹಸಿವಲ್ಲಿ, ಒಮ್ಮೆಯಾದರೂ ಬದುಕಿಯೇ ಸತ್ತುಬಿಡುವ ಎನ್ನುವ ಮನದ ಬಿಳುಪಿನಲ್ಲಿ

ಮತ್ತೆ ಹಸಿರಾಗಲಿ ಕನಸುಗಳ ಕತ್ತಲಲ್ಲಿ ಬೆಳಕ ಉದಯವಾಗಲಿ ನನ್ನ ಮನದ ಅಂಗಳದಲ್ಲಿ.

Sunday, 6 April 2025

ಮೊದಲ ಸಲ ಬದುಕಿರುವೆ ಅನಿಸುತಿದೆ....!

ನನಗೆ,


ದಿನ ಒಂದು ಕಳೆದರೆ ಬದುಕಿನ ಮತ್ತೊಂದು ವರುಷ ಸಂಪೂರ್ಣ ಕಳೆದಂತೆ. ದಿನ ಕಳೆದಂತೆ ಕ್ಷಣ ಜಾರಿದಂತೆ ಬದುಕಿನ ಆಯಸ್ಸು ಕಡಿಮೆ ಆದರೂ ಅದನ್ನು ಲೆಕ್ಕದಲ್ಲಿ ಹುಡುಕುವುದು ವರುಷಗಳಲ್ಲೇ. 


ಬದುಕಿನ ಮತ್ತು ಬದುಕುವ ಮೂಲ ಆಶಯ ಇದುವರೆಗೂ ಗುರುತಿಸಿಕೊಳ್ಳುವುದು  ಪ್ರೀತಿಗಳಿಸುವುದು ಮಾತ್ರವೇ ಆಗಿತ್ತು ಬಹುಷಃ ಪ್ರತಿ ಮನುಷ್ಯನ ಬಯಕೆಯು ಅದೇ. ಆ ಗುರುತಿಸಿಕೊಳ್ಳುವುದು ಹುಟ್ಟಿನಿಂದ ಪ್ರಾರಂಭವಾಗಿ ನಂತರ ಅವರವರ ಅವಶ್ಯಕತೆಗೆ ತಕ್ಕಂತೆ ಬದಲಾಗುತ್ತದೆ ಮತ್ತು ಗುರುತಿಸಿಕೊಳ್ಳುವ ಬಯಕೆ ಸಂಪೂರ್ಣವಾಗದಿದ್ದರೆ ಕಡೆಗೆ ಬದುಕೇ ಬೇರೆಯವರ ಗಮನ ಸೆಳೆಯಲು ಆಗಿಬಿಡುತ್ತದೆ. 

ಇಂತದ್ದೇ ಒಂದು ಬದುಕು ಬದುಕುತ್ತಿದ್ದೇನೆ ಎಂದು ಅರ್ಥವಾಗಿದ್ದೆ ಈಗೊಂದು ವರುಷದ ಹಿಂದೆ, ಆಗಿನಿಂದ ನಂಗೊಸ್ಕರ ಕೇವಲ ನನ್ನ ಖುಷಿಗೋಸ್ಕರ ಮಾತ್ರ ಬದುಕುವ ಪ್ರಯತ್ನದಲ್ಲಿದ್ದೇನೆ. ಯಾರೇನೋ ಹೇಳುತ್ತಾರೆ, ಯಾರೋ ಸಿಟ್ಟಾಗುತ್ತಾರೆ ಮತ್ಯಾರೋ ಬಿಟ್ಟು ಹೋಗುತ್ತಾರೆ ಇನ್ಯಾರೋ ದೂರ ಮಾಡುತ್ತಾರೆ ಅಬ್ಬಾ ಎಷ್ಟೊಂದು ಭಯಗಳು! ಬದುಕಿಗೆ, ಎಲ್ಲವನ್ನು ಗೆದ್ದಿದ್ದೇನೆ ಅಂತಲ್ಲ ಆದರೆ ಇದು ಯಾಕೆ ಹೀಗೆ ಮತ್ತು ಇದರ ಕಾರಣ ನನ್ನೊಳಗೆ ಏನು ಎಂದು ಗುರುತಿಸಿಕೊಳ್ಳುವುದ  ಕಲಿತಿದ್ದೇನೆ. 

ಇಲ್ಲಿ ಬರೆದಿದ್ದೇನೆ ಅಷ್ಟೇ ನಾನು ನಂಗಾಗಿ ನನ್ನ ಬದುಕು ಅಂತೆಲ್ಲ, ಆದರೆ ನಿಜದ ನನ್ನ ಬದುಕನ್ನು ಬದುಕಲು ಈಗೊಂದು ಸ್ವಲ್ಪ ದಿನದಲ್ಲಿ ಪ್ರಾರಂಭಿಸಿದ್ದೇನೆ. 

ಖುಷಿಗಳೇ ಬದುಕಲ್ಲಿ ಅಂತೇನು ಇಲ್ಲ ಆದರೆ ನೋವಿಗೂ ನಲಿವಿಗೂ ಮೂಲ ಕಾರಣ ಹುಡುಕುವ ಮತ್ತು ಸಿಕ್ಕ ಕಾರಣಗಳನ್ನು ಒಪ್ಪಿಕೊಳ್ಳುವ ದಾರಿ ಸಿಕ್ಕಿದೆ. 


ತೀರಾ ಯಾರ ಬದುಕೂ ಸಮತೆಯಲ್ಲಿ ಇರುವುದಿಲ್ಲ ಆದರೆ ನಾವುಗಳು ನೋವುಗಳನೆಲ್ಲ ಬದಿಗಿಟ್ಟು ಮೇಲಿನಿಂದ ಒಂದು ಚಂದದ ಅಂಗಿ ಹಾಕಿ "ನಾನು ಖುಷಿ" ಎನ್ನುವ ಸುಳ್ಳು ಬದುಕನ್ನು ಬದುಕುತ್ತ ಅದನ್ನೇ ನಂಬುತ್ತಾ ಬದುಕುತ್ತೇವೆ, ಎಲ್ಲೋ ಏನೋ ಆದರೆ ನನ್ನ ಹಣೆಬರಹ ಇದು ಎನ್ನುತ್ತಾ ಮುಂದೆ ಹೋಗುವುದು. ಆ ಭಾವಗಳು ಹೊರಬರುವುದು ಯಾವುದೊ ರೂಪದಲ್ಲಿ ಕಡೆಗೆ ಯಾಕೆ ಎನ್ನುವ ಕಲ್ಪನೆಯೂ ಇರುವುದಿಲ್ಲ.  

ಯಾಕೆ ಹಣೆಬರಹ ಆಗಿದ್ದನ್ನೇ ಮತ್ತೆ ಮತ್ತೆ ಆಗುವಂತೆ ಮಾಡುತ್ತದೆ ಎಂದರೆ ಅದು ನಮ್ಮ ಬಾಲ್ಯ ನಮಗೆ ಕೊಟ್ಟ ಬರಹ ಆಗಿರುತ್ತದೆ. 


ಮನಸೇ,

ನಿನ್ನ ದಾರಿಯ ಹುಡುಕಿ-ಕೊಳ್ಳುವ ಮತ್ತು ಅದರಂತೆ ಬದುಕುವ ಎಲ್ಲ ಹಕ್ಕು ಮತ್ತು ಸ್ವಾತಂತ್ರ್ಯ ಎರಡು ನಿನಗಿದೆ.  ಈ ದಾರಿಯಲ್ಲಿ ತುಂಬಾ ಕಲ್ಲು ಮುಳ್ಳುಗಳಿವೆ ಎಷ್ಟೋ ಕವಲುಗಳು ಬರಬಹುದು ಎಷ್ಟೋ  ಪರಿಚಿತರು ಅಪರಿಚಿತರಾಗಬಹುದು. ಇನ್ಯಾರೋ ಏನು ಅಲ್ಲದ ಪ್ರೀತಿ ಒಂದು ನಿನ್ನ ತಬ್ಬಲೂಬಹುದು. ಎಲ್ಲವನ್ನು ಸ್ವೀಕರಿಸು ಎಲ್ಲವು ನಿನ್ನ ದಾರಿಯಷ್ಟೇ. ನಿನ್ನ ಗುರಿ ಬೇರೆಯದೇ ಮತ್ತದು ಕೇವಲ ನಿನ್ನದು, ಅಲ್ಲಿ ನಿನ್ನ ಎಲ್ಲ ಖುಷಿಗಳಿಗೂ, ಮಗುವಿನಂತೆ ಮಾತನಾಡಲು, ಬದುಕಲು, ಕೋಪಮಾಡಿಕೊಳ್ಳಲು ಮನ ಬಂದಂತೆ ನಗಲು ಎಲ್ಲದಕ್ಕೂ ಸ್ವಾತಂತ್ರ್ಯವಿದೆ. ಮತ್ತು ಇದು ನಿಂಗೆ ನೀನು ಕೊಡುವ ದೊಡ್ಡ ಉಡುಗೊರೆ. 
ಸಮತೆ ಎಂಬುದಿಲ್ಲ ಭಾವಗಳ ಜೀವಂತಿಕೆಯೇ ಬದುಕು, ಮುಖವಾಡ ಹೊತ್ತು ಯಾರನ್ನೂ ಗೆಲ್ಲಬೇಕಿಲ್ಲ, ಯಾರನ್ನೊ ಮೆಚ್ಚಿಸಲು ನಿನ್ನದಲ್ಲದ ಬದುಕ ಹೊತ್ತಿದ್ದು ಸಾಕಿನ್ನು.

ನಗುವೇ ಇರಬೇಕು ಅಂತೇನು ಇಲ್ಲ ಆದರೆ ಬೀಳುವ ಕಣ್ಣೀರು ಮತ್ತು ನಗುವ ನಗು ಎರಡು ನನ್ನದು ಮತ್ತು ನನಗಾಗೇ ಇರಲಿ ಅದೊಂದೇ ಆಶಯ. 
ಜೀವಂತಿಕೆಯ ಬದುಕು ನಿನ್ನದಾಗಲಿ. 

Monday, 11 November 2024

ಸುಮ್ಮನೆ ನಿಂತು ಬದುಕಿನೊಡುತ್ತ....

ಮನವೇ...,

ನಾನು ಯಾರು? ಎಂದು ಮತ್ತದೆ ಮಹಾನಗರಿಗೆ ಬಂದು ಪ್ರಶ್ನೆ ಕೇಳುವ, ಉತ್ತರವ ಹುಡುಕಿ ಹೊರಡುವ ಕಾಲ ಬಂದಿದೆ. ಬದುಕು ಒಂದಷ್ಟು ವರುಷಗಳ ನಂತರ ಮತ್ತೆ ಎಲ್ಲಿಂದ ನನ್ನ ಅಸ್ತಿತ್ವವ ಹುಡುಕ ಹೊರಟಿದ್ದೆನೋ ಅಲ್ಲಿಗೆ ತಂದು ನಿಲ್ಲಿಸಿದೆ.  

ಇಲ್ಲಿ ನಂಗೆ ನಾನು, ಪ್ರಶ್ನೆ ಕೇಳುತ್ತ, ಉತ್ತರವ ಹುಡುಕುತ್ತ, ಅಥವಾ ಉತ್ತರವ ಹುಡುಕುವ ನೆಪದಲ್ಲಿ ಬದುಕುತ್ತ, ನಡೆಯುತ್ತ, ಜೀವಂತಿಕೆಯನ್ನು ಕಂಡವಳು ನಾನು. ನಂಗೆ ಬದುಕುವ ಹುಚ್ಚು ಮತ್ತು ಬದುಕಿನೆಡೆಗೆ ಅತೀವ ಕುತೂಹಲ ಎರಡು ಇದೆ ಮತ್ತು, ಇದೇ ನನ್ನನ್ನು ಸದಾಕಾಲಕ್ಕೂ ಬದುಕಿಸುತ್ತ ಜೀವಂತವಾಗಿಸುತ್ತ ಬಂದಿದೆ. 

ಯಾಕೆ ಬದುಕಬೇಕು? ಎನ್ನುವ ಪ್ರಶ್ನೆಗೆ ನಂಗೆ ಉತ್ತರ ಯಾವಾಗಲು ನಾನೇ ಆಗಿದ್ದೇನೆ ಮತ್ತು ನನ್ನ ಬದುಕುವ ಹುಚ್ಚಿಗೆ ಕಾರಣವೂ ನಾನೇ ಆಗಿದ್ದೇನೆ. 

ಆದರೆ, ಇಂದು ಅಸ್ತಿತ್ವದ ಹುಡುಕಾಟವಿಲ್ಲ ನಂಗೆ, ನಾನು ಯಾರು ಗೊತ್ತು. ಗಟ್ಟಿಯಾಗಬೇಕು, ಗೆಲ್ಲಬೇಕು, ಗೆದ್ದು ಯಾರಿಗೊ ಬದುಕನ್ನು ಉತ್ತರವಾಗಿ ನೀಡಬೇಕು ಎನ್ನುವ ಭಾವವಿಲ್ಲ. ನನ್ನ ಬದುಕು ಯಾರಿಗಾಗೊ ಅಲ್ಲ ಇಲ್ಲಿ ನಾನು ಮಾತ್ರ. ಸಾವಿನ ಬಗ್ಗೆ ಕುತೂಹಲವಾಗಲಿ, ಭಯವಾಗಲಿ ಇಲ್ಲ. ಬರುವಾಗ ಸಾವು ಬಂದು ಅಪ್ಪಬಹುದು. ನಾಳೆ ಸೋತರೆ!, ಯಾರೊ ನಕ್ಕಾರು ಎಂಬ ಭಯವಿಲ್ಲ ಸೋತಾಗ ಯಾರಿದ್ದರೆನು ಎಂಬ ಉಡಾಫೆ ಮನಕ್ಕೆ. ಮತ್ಯಾವ ಭಾವ ಕಾಡಲು ಸಾಧ್ಯ? ನನ್ನ ಕನಸುಗಳ? ಕನಸುಗಳು  ಮರೆತುಹೋಗಿವೆ ಹಳೆಯ ನೆನಪುಗಳು ಉಳಿದಿಲ್ಲ. ಅಲ್ಲಿಗೆ ಬದುಕಿಗೆ ಇಂದು ಈ ಕ್ಷಣ ಮಾತ್ರ ಮುಖ್ಯ. ನಾನಿಲ್ಲಿ ನನ್ನ ಬದುಕಿನ ಏಳು ಬೀಳಿನ ಜೊತೆ ನಾನು ನಿಲ್ಲಬಲ್ಲೆನೆಂದರೆ ಅದು ಇಂದಿನ ಗೆಲುವು. ನೋವಿಗೆ ಕುಗ್ಗದೆ ಅತೀ ಭಾವುಕನಾಗೊ ಭಯಕ್ಕೆ ಬಿದ್ದೊ ಸಮಸ್ಯೆಯಿಂದ ಓಡಿಹೋಗದೆ ನಿಲ್ಲಬಲ್ಲೆನು ಎಂದರೆ ಈ ಕ್ಷಣದ ಗೆಲುವು. 

ಬದುಕು ಕಲಿಸಿದ ದೊಡ್ಡ ಪಾಠ ಅದುವೇ ನಿಲ್ಲಬೇಕು... ನಾನು ಇಲ್ಲೆ ನಿಲ್ಲಬೇಕು ಸುತ್ತಲಿನ ಪ್ರಪಂಚದಲ್ಲಿ ಏನೆ ಆಗುತ್ತಿದ್ದರೂ ನಾನು ಇಲ್ಲೆ ನಿಲ್ಲಬೇಕು. ಭಯಕ್ಕಲ್ಲ ನಿಂತಿದ್ದು, ಭಂಡ ಧೈರ್ಯಕ್ಕೆ ಏನಾಗುತ್ತದೆ ನೋಡೊಣ ಎಂಬ ಹುಚ್ಚಿಗೆ. 

ಮಹಾನಗರವನ್ನು ತುಂಬ ಪ್ರೀತಿಸುವ ನಂಗೆ ಇಂದು‌ ಅಸ್ತಿತ್ವದ ಹೋರಾಟದ ಹುಚ್ಚು ಇಲ್ಲ. ಸುಮ್ಮನೇ ಸೋಲುವ ಸುಸ್ತು ಇಲ್ಲ. ನಿಂತು ಸುಮ್ಮನೆ ನಿಂತು ಎಲ್ಲವನ್ನೂ ನೋಡಿಯೂ ಏನು ಅರಿಯದಂತೆ ಏನೂ ಅರ್ಥವಾಗದಂತೆ ನಗದಂತೆ ಅಳದಂತೆ ಸುಮ್ಮನೇ ನಾನು ನಾನಾಗಿ ನಿಂತುಬಿಡುವ ಆಸೆ‌. 

ಈ ಸುಮ್ಮನೆ ನಿಲ್ಲುವುದಿದೆಯಲ್ಲ, ಅದರಿಂದ ಎಷ್ಟೊಂದು ಹಿತವೆಂದು ಅರಿಯುವ ಆಸೆ ನಂಗೆ. ಯಾವ ಭಾವ ತೀವ್ರತೆಯು ಇಲ್ಲದೆ ಕೇವಲ ನಂಗೆ ನಾನಾಗಿ ಬದುಕುವ ದಾರಿ ಬಂದಂತೆ ಬದುಕ ಸ್ವೀಕರಿಸುವ ಸುಮ್ನನೆ ಬದುಕುವ ಆಸೆ ನಂಗೆ. ಮೊದಲೆಲ್ಲ ಅನಿಸುತ್ತಿತ್ತು, ಸುಮ್ಮನೆ ಬದುಕುವುದೆಂದರೆ ಸತ್ತಂತೆ ಭಾವ ತೀವ್ರತೆಯೆ ಬದುಕು ಎಂದು. ಆದರೆ ಬದುಕು ಕೊಟ್ಟ ಅತೀ ದೊಡ್ಡ ಪಾಠ ಸುಮ್ಮನೆ ನಿಂತುಬಿಡು ಬದುಕಿಗೂ ಸಮಯಬೇಕು ಬದುಕಲು... ಸಂತೆಯ ಮಧ್ಯದಲ್ಲಿ ನಿಂತಲ್ಲೆ ನಿಂತು ಓಡುವ ಬದುಕನ್ನು ನೋಡುತ್ತ ಬದುಕುವ ಆಸೆಯನ್ನೂ ಜೀವಂತಿಸಿಕೊಂಡಿದ್ದೇನೆ. ಮನಸೊಂದಷ್ಟು ದಿನ ಈ ಖಾಲಿತನವನ್ನು ತುಂಬಿಕೊಳ್ಳಲಿ...


ನಂಗೆ ನಾನು ಮತ್ತೆ ಮತ್ತೆ ಸಿಗಲಿ ಎಂಬುದೊಂದು ಆಸೆ.

ಅಭಿಸಾರಿಕೆ

Monday, 22 July 2024

ಬದುಕನ್ನು ಬದುಕಿ ನೋಡುವ ಸಮಯ

 ಹೇ, 

ತುಂಬಾ ದಿನಗಳ ಮೇಲೆ ಮತ್ತೆ ಬರೆಯುವ ಆಸೆಯಾಗಿದೆ. ಮೊದಲೆಲ್ಲ ಅಭಿಸಾರಿಕೆ ಎಂದರೆ ನನ್ನ ನೋವಿಗೆ ನಲಿವಿಗೆ ನನ್ನ ಒಂಟಿತನಕ್ಕೆ ನನ್ನ ಮನಸಿನ ಯಾವುದೇ ಭಾವಕ್ಕೂ ಕೇಳುವ ಕಿವಿ ಮತ್ತು ಸಮಾಧಾನದ ಮಡಿಲಾಗಿತ್ತು. ಒಂದಷ್ಟು ಕಾಲಗಳ ಕಾಲ ಇಲ್ಲಿ ಬರೆದು ನನ್ನೆಲ್ಲ ಭಾವಕ್ಕೆ ದಾರಿ ಮಾಡಿಕೊಟ್ಟೆ. ಒಂದಷ್ಟು ಕಾಲ ನಂಗ್ಯಾವ ಭಾವವು ಕಾಡುತ್ತಿಲ್ಲ ಎಂದು ಸುಳ್ಳು ಸಮಾಧಾನ ಮಾಡಿಕೊಂಡು ಮುಖವಾಡದ ಬದುಕ ಹೊತ್ತೆ, ಈ ಕ್ಷಣಕ್ಕೆ ಭಾವಗಳನ್ನ ಇದ್ದಂತೆಯೇ ಹೇಳಬಲ್ಲ ಮತ್ತು ಹೇಳಿದ್ದನ್ನು ಹೇಳಿದಂತೆಯೇ ಅರ್ಥೈಸಿಕೊಳ್ಳಬಲ್ಲ ಜಾಗ ಒಂದು ಸಿಕ್ಕಿದೆ ಅದೇ ನನ್ನ ಥೆರಪಿ ರೂಮ್. 

ಇಲ್ಲಿ ಹೇಳುವ ಮಾತನಾಡುವ ಯಾವುದು ನನ್ನ ಕಿವಿ ಥೆರಪಿಸ್ಟ್ ಕಿವಿ ಬಿಟ್ಟು ಇನ್ನೆಲ್ಲೂ ಹೋಗುವುದಿಲ್ಲ ಅದಕ್ಕೆ ಅದು ಸುರಕ್ಷಿತ ಜಾಗ. 

ಸುಮಾರು ವರ್ಷಗಳ ಹಿಂದೆ ಮನಸು ಇಲ್ಲದ ಮಾರ್ಗ ಎನ್ನುವ ಒಂದು ಪುಸ್ತಕ ಒಂದಿದ್ದೆ, ಅದನ್ನು ಓದಿ ಒಂದಷ್ಟು ದಿನಗಳ ಕಾಲ ಸಿಟ್ಟೇ ಮಾಡಿಕೊಳ್ಳದೆ ಬದುಕಿದ್ದೇ. ಆದರೆ ನಿಜವಾದ ಥೆರಪಿ ಸಿಟ್ಟೇ ಬರದಂತೆ ತಡೆಯುವುದಿಲ್ಲ ನಾನು ನಾನಾಗಿ ಬದುಕಲು ಕಲಿಸುತ್ತದೆ. ಥೆರಪಿಗೆ ಹೋಗಲು ಮಾನಸಿಕ ಸಮಸ್ಯೆಯೆ ಬೇಕೆಂದಿಲ್ಲ. ಹಾಗೆ ನೋಡಿದರೆ ಎಲ್ಲರಿಗು ಒಂದಲ್ಲ ಒಂದು ಮಾನಸಿಕ ಸಮಸ್ಯೆ ಇದ್ದೆ ಇರುತ್ತದೆ. ಸ್ಥಿತ ಪ್ರಜ್ಞನಾಗಿರುವುದು ಎಂದರೆ ಅವರು ಮಾನಸಿಕ ಸಮಸ್ಯೆ ಇಂದ ಹೊರಬಂದವರು ಎಂದಲ್ಲ. ಬೇರೆಯವರು ಅಳುತ್ತಾರೆ ಮತ್ತು ಅಳುವದು ತಪ್ಪು ಎಂದು ಹೇಳುವವರಿಗೆ ಅಳುವುದು ಕಷ್ಟಸಾಧ್ಯ. ನಾವು ನಾವಾಗಿ ಬದುಕಬೇಕು ಆದರೆ ಎಷ್ಟೋ ಸಲ ನಮ್ಮ ಬದುಕು ಬೇರೆಯವರ ಬರಹವೇ ಆಗಿರುತ್ತದೆ. 

ಥೆರಪಿಯಲ್ಲಿ ಪ್ರತಿ ಮಾತು ನನ್ನದಲ್ಲದ ಯಾರ  ಮಾತು ಎಂದು ಗೊತ್ತಾಗುತ್ತದೆ, ಯಾರೋ ಹೇಳಬಹುದು ನೀನು ಬದುಕಿನ ಹಿಂದಿನದನ್ನು ಹುಡುಕಹೊರಟಿದ್ದೀಯ ಅದಕ್ಕೆ ಎಲ್ಲವು ಅಸಮಂಜಸವಾಗಿದ್ದೆ ಕಾಣಿಸುತ್ತದೆ, ನಾವು ಮುಂದೆ ನೋಡಬೇಕು ಹಳೆಯದನ್ನು ಮರೆಯಬೇಕು ಎಂದು. ಆದರೆ ನಮ್ಮ ಬದುಕು ಏನೆಂದು ಮೊದಲ ೬-೭ ವರುಷದಲ್ಲಿಯೇ ನಿರ್ಧಾರವಾಗಿರುತ್ತದೆ. ಸ್ಕ್ರಿಪ್ಟ್ ತಯಾರಾಗುವುದು ಈ ಕಾಲದಲ್ಲಿಯೇ ಅಮೇಲಿನದೆಲ್ಲ ನಮ್ಮ ಅಭಿನಯ. ಆದರೆ ಒಂದಲ್ಲ ಒಂದು ರೀತಿಯಲ್ಲಿ ಒಂದಲ್ಲ ಒಂದು ವ್ಯಕ್ತಿ ಜೊತೆಯಲ್ಲಿ ಮೊದಲಾಗಿರುವುದೇ ನಂತರವೂ ಆಗುವುದು. ಎಷ್ಟೋ ಬಾರಿ ನಾವು ಹೇಳುತ್ತೇವೆ ಯಾಕೆ ನನಗೆ ಯಾವಾಗಲೂ ಹೀಗೆ ಆಗುತ್ತದೆ ಎಂದು. ಯಾಕೆಂದರೆ ಅದು ನಮ್ಮ ಬದುಕಿನ ನಿರ್ಧಾರದ ದಿನಗಳಲ್ಲಿ ನಾವು ಅರ್ಥೈಸಿಕೊಂಡ ಬದುಕಿನ ಕಥೆ ಆಗಿರುತ್ತದೆ. 

ಮನಸು, ಮನಸಿನ ಸಮಸ್ಯೆ ಮಾನಸಿಕತೆ ಎಲ್ಲರಿಗು ಇದೆ ಅದನ್ನು ನೋಡುವ ಮತ್ತು ಗುಣಪಡಿಸಿಕೊಳ್ಳುವ ಧೈರ್ಯ ಬೇಕು. ನಾನು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ.  ಖುಷಿಯನ್ನು ಖುಷಿಯಾಗಿ ನೋವನ್ನು ನೋವನ್ನಾಗಿ ನೋಡುವ ಈ ಹಾದಿ ಚಂದವಿದೆ. 

Thursday, 6 April 2023

ಬದುಕಿನ ಮತ್ತೊಂದು ಪುಟ ತೆರೆದುಕೊಳ್ಳುವ ಮುನ್ನ...

ಬೆಳಗಾದರೆ ೩೧ನೇ ವಸಂತಕ್ಕೆ ಕಾಲಿಡುತ್ತಿದ್ದೇನೆ. ದಿನವೂ ತೆರೆದುಕೊಳ್ಳುವ ಬರೆದ ಸಾಲುಗಳನ್ನೆ ಮತ್ತೆ ಮತ್ತೆ ಓದುತ್ತಾ ಇದು ಹೀಗಿರಲಿಲ್ಲ ಇದು ಹೀಗೇ ಆಯಿತಲ್ಲಾ ಎಂದುಕೊಳ್ಳುತ್ತಾ ಇರುವ ದಿನಗಳನ್ನು ಕಳೆಯುತ್ತಿರುವ ಇದೇ ಬದುಕಿನ ಮತ್ತೊಂದು ದಿನವಷ್ಟೆ ನಾಳೆಯೂ.. ಆದರೂ ಬರೆಯಬೇಕು.

ಈಗಾ ಅರ್ಥವಾಗಿದೆ ಬರೆಯಬೇಕು ಅಲ್ಲಿಂದಲೇ ಬದುಕಿಗೆ ಹೊಸ ಅರ್ಥಬರುವುದು. ಯೋಚನೆಗಳಿಗೆ, ಮಾತುಗಳಿಗೆ  ಜಾಗವೊಂದು ಬೇಕು ನಂಗೆ ಅದು "ಅಭಿಸಾರಿಕೆ". 

ಸಿಹಿ ನೆನಪುಗಳನ್ನು ಕೂಡಿಡಬೇಕಂತೆ ಆದರೆ, ಕೂಡಿಟ್ಟಿದ್ದು ಕೊಳೆಯುತ್ತದೆ. ಅಂದರೆ ಹರಿಬಿಡಬೇಕು, ಹರಿದಲೆಲ್ಲ ಹಸಿರು, ಹರಿದಷ್ಟು ಬದುಕು ತಿಳಿಯಾಗುತ್ತದೆ.

ಪ್ರೀತಿಗಿಂತ ಆಸ್ತಿಯಿಲ್ಲ, ಎಂಬುದು ಹೃದಯದ ಮಾತು. ಬದುಕಿನ ಕನಸುಗಳಿಗೆ, ಪ್ರೀತಿಗಿಂತ ದುಡ್ಡು ಬೇಕು ಎನ್ನುವುದು ಕಂಡುಕೊಂಡ ಸತ್ಯದ ಮಾತು.

ಆತ್ಮ ಶುದ್ಧಿಯೇ ಬದುಕಿನ ಗುರುತು ಎಂದ ಮನಸಿಗೆ ಬದುಕ ತತ್ವಗಳ ಹುಡುಕಾಟ.ಕನಸೆಂದರೆ ಹಠ ಗೆಲುವೆಂದರೆ ಬದುಕು ಎಂದು ಸಾಲು ಸಾಲು ಬರೆದ ಹುಚ್ಚಿಗೆ ಸೋಲುಗಳ ಕೈ ತುತ್ತು.

ಯಾರದೋ ಪ್ರೀತಿಯ ಮಾತುಗಳಿಗೆ ರೋಮಾಂಚನಗೊಂಡವಳಿಗೆ, ಪ್ರೀತಿಯ ಸವಿ ಹರಿಸಲು ಮಡಿಲಲ್ಲೊಂದು ನಗುವ ಹಸುಳೆ.

ಸುಮ್ಮನೆ ಬೇಸರವಾದಾಗಲೂ ಒಂದಷ್ಟು ದೂರ ನಡೆಯುತ್ತಿದ್ದವಳಿಗೆ ಸುಖಾಸುಮ್ಮನೆ ಕುಳಿತರೂ ಮೈಮನಕ್ಕೆಲ್ಲಾ ನೋವು.

೩೦ ಮುಗಿಯುತ್ತಿದ್ದಂತೆ ಬದುಕು ಎಷ್ಟೆಲ್ಲಾ ಬದಲಾಯಿತು ಏನೆಲ್ಲವನ್ನು ಕಲಿಸಿತು. ಮತ್ತೊಂದು ಪುಟಕ್ಕೆ ತೆರೆದುಕೊಳ್ಳುವ ಮುನ್ನ ನನ್ನೊಳಗೆ, ಒಂದಷ್ಟು ಆತ್ಮ ವಿಮರ್ಶೆಯಾಗಬೇಕು, ನನ್ನ ಜೊತೆ ನಾನು ಕೂತು ಮಾತನಾಡಬೇಕು, ನನ್ನ ಮಡಿಲಲ್ಲಿ ಮಲಗಿ ಒಂದಷ್ಟು ಸಾಂತ್ವನದ ಸವಿ‌ಸವಿಯಬೇಕು.  

೩೦ ವರುಷಗಳಿಂದಲೂ ನನ್ನೊಡನೆ ಬಂದ ಒಳಗಿನ ಮಗುವನ್ನು, ಹರೆಯದ ಕೂಸನ್ನು, ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಲು ಹೊರಟ ಹುಚ್ಚು ಹುಡುಗಿಯನ್ನ, ಒಲವ ಹೊಳೆಯಲ್ಲಿ ತಂಪಾದ ತಾಯಿಯನ್ನ ಒಮ್ಮೆ ನೊಡಿಕೊಳ್ಳಬೇಕು.

ನಗುವಿನ‌ ಹುಡುಕಾಟದ 
ಅದೇ ಅಭಿಸಾರಿಕೆ


Sunday, 30 October 2022

ಮಗಳಿಗೆ...

ಮಗಳೆಂಬೊ ಮುದ್ದು ಗುಬ್ಬಿಗೆ..

ಶ್ರಾವಣದ ಕೊನೆಯ ಮಂಗಳವಾರ ಪುಟ್ಟ ದೇವತೆ ಒಬ್ಬಳು ಜನಿಸಿದಳು. ನನ್ನ ಬದುಕಿನ‌‌‌ ಅತೀ ಯಾತನೆಯ ಕ್ಷಣವೊಂದು ನಗುವಾಗಿ ಪರಿವರ್ತನೆಯಾಯಿತು. ಅಸಾಧ್ಯವಾದ ಗೆಲುವೊಂದು ದಕ್ಕಿದ ದಿನ‌‌ ಅದು. 

ಕಂದಾ...
ನೀನು ನನ್ನ ಜೀವನ‌ ಪ್ರೀತಿ, ಬದುಕುವ ಕಾರಣ. ನನ್ನ ಗೆಲ್ಲಿಸಿದಾಕೆ‌. ದಿನಗಳು ಕ್ಷಣಗಳಾಗಿ ಕಳೆಯುತ್ತಿವೆ. ನಿನ್ನ ಹೊರತಾಗಿ ಬದುಕಿಗೆ ಮತ್ತೇನು ಬೇಕಿಲ್ಲ ಎನಿಸುತ್ತಿದೆ. ಯಾವ ಸೋಲು‌ ಯಾವ‌‌ ಗೆಲುವು ದೊಡ್ಡದಲ್ಲ, ನಿನ್ನ ಅಳುವು ಮನಸ್ಸನ್ನು ತೀವ್ರವಾಗಿ ಸಂತೈಸುವ ಯಾವುದೋ‌ ಸಂಗೀತದಂತೆ. 
ಈಗೀಗಾ‌ ನೀನು ನಗುತ್ತಿಯಲ್ಲ‌ ಅದರಲ್ಲಿ ನನ್ನ ಉಸಿರೆ ಇದೆ ಎನಿಸುತ್ತಿದೆ. ನಿನಗಾಗಿ  ನನ್ನ ಉಸಿರ ಬಿಗಿ ಹಿಡಿದು ಬದುಕಿಬಿಡುವೆ ಬದುಕಿನೆಲ್ಲ ಏರಿಳಿತಗಳ ಹೊರತಾಗಿಯೂ...

ನಿನ್ನ ಬದುಕಿಗೆ ನೆರಳಾಗಿ ನಿನ್ನ ಕನಸಿಗೆ ಜೊತೆಯಾಗಿ, ನನ್ನ ಬದುಕ ಕೊನೆಯ ತನಕ ನಿನ್ನನ್ನು ಪ್ರೀತಿಸುತ್ತಲೇ ಇರುತ್ತೇನೆ. 

ನಿನ್ನ ಹೆಸರು ಸೀತೆಯ ಇನ್ನೊಂದು ಹೆಸರು ನೀನು ಅವಳಂತೆ ಎಂತಹ ಕಷ್ಟದಲ್ಲೂ ನೀನು ನೀನಾಗಿಯೆ ಇರಬೇಕು. 

ತುಂಬಾ ಪ್ರೀತಿ ‌ಮುದ್ದು ಮೈಥಿಲಿ...

Thursday, 5 May 2022

ಜೀವ ನಿನ್ನಾಸರೆಗೆ ಕಾಯುತಿಹುದು...

ನನ್ನೊಳಗಿನ ಪುಟ್ಟ ಹೃದಯವೇ... 

ನನ್ನ ಬದುಕಿನ ದೊಡ್ಡ ಕನಸು ನೀನು, ನನ್ನೊಳಗೆ ನಿನ್ನ ಹೃದಯ, ನಿನ್ನ ಉಸಿರಾಟ, ನಿನ್ನ ಪುಟ್ಟ ಪಾದಗಳ ಸ್ಪರ್ಶ ಸುಖ. ನೀನು ನನ್ನ ಪುಟ್ಟ ಕಂದ. 

ಇನ್ನೊಂದು ಸ್ವಲ್ಪ ದಿನವಾದರೆ ನಿನ್ನ ಅಳು ನಗುವಿನ ಮೆರವಣಿಗೆ ನನ್ನ ಬದುಕಿನ ಹಬ್ಬದ ದಿನಗಳು ಪ್ರಾರಂಭ.  

ಇಷ್ಟು ದಿನ ಬದುಕಿದ ಬದುಕಿಗೆ ಖುಷಿ, ಸಾರ್ಥಕತೆ ಎಂದರೆ  ಅದು ನೀನು ಬರುತ್ತೀಯ ಎಂದಾದ ಮೇಲಿನ ಈ ದಿನಗಳು.  ಬದುಕ ಗೆಲುವಿನ ಹಠಕ್ಕೆ ಬಿದ್ದ ತೀರಾ ಭಾವುಕ ಮನಕ್ಕೀಗ, ಬದುಕುವ ನಿಜ ಕಾರಣ ಸಿಕ್ಕದ ಖುಷಿ. ಈ ಕಾರಣಕ್ಕಿಂತ, ಇನ್ಯಾವ ಕಾರಣವೂ ಬೇಕಿಲ್ಲ ಬದುಕಲು ನಂಗೆ. 

ಏನೆಂದು ಬರೆದಿಡಲಿ ಇಲ್ಲಿ? ಆದರೆ ಬರೆಯಲೇ ಬೇಕು ನನ್ನ ಬದುಕಿನ ಎಲ್ಲ ದ್ವಂದ್ವಗಳಿಗೆ, ಕನಸುಗಳಿಗೆ, ಕಿವಿಯಾದ ಈ ಅಭಿಸಾರಿಕೆಯ ಮಡಿಲಲ್ಲಿ ನಿನ್ನ ಬಗ್ಗೆ ಹೇಳದಿದ್ದರೆ ತಪ್ಪಾದೀತು. 

ನಿನ್ನ ಹೃದಯ ಬಡಿತ ಕೇಳಿದ ದಿನಗಳಿಂದ ನಿನ್ನ ಪುಟ್ಟ ಪಾದ ಸ್ಪರ್ಶವಾಗುತ್ತಿರುವ ಈ ಘಳಿಗೆಗಳು ನನ್ನ ಬದುಕಿನ ಅಮೂಲ್ಯ ಕ್ಷಣಗಳು. ಅಕ್ಷರಸಹ ಜೀವಿಸುತ್ತಿದ್ದೇನೆ ಈ ದಿನಗಳನ್ನು. 


ನಿನ್ನ ಬೆಳವಣಿಗೆಯಲ್ಲಿ ನಿನ್ನ ಕಲಿಕೆಯಲ್ಲಿ ನಾನು ಬದುಕುವ ಕಲಿಯುವ ಬಯಕೆ ಮನದ ತುಂಬಾ. ಆರೋಗ್ಯವಾಗಿರು ನನ್ನೊಳಗಿರುವ ಆ ಹೃದಯಲ್ಲಿ ನನ್ನ ಜೀವವೇ ಇದೆ. 

ಕಾಯುತ್ತಿರುವೆ ನಿನಗಾಗಿ....